ಭರತನಾಟ್ಯ ಜೂನಿಯರ್ ಪರೀಕ್ಷೆ : ಅನನ್ಯ ಉಲ್ಲಾಸ್, ನಿಹಿರಾ ರಾವ್ ಸಾಧನೆ
ಮಂಗಳೂರು, ಡಿ.11: ನಗರದ ಉರ್ವ ನಾಟ್ಯಾರಾಧನಾ ಕಲಾ ಕೇಂದ್ರ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ಕಳೆದ ಮೇ ತಿಂಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಟಾಪ್ ಹತ್ತರೊಳಗಿನ ಸ್ಥಾನ ಪಡೆದಿದ್ದಾರೆ.
ಸಂಸ್ಥೆಯ ಸುರತ್ಕಲ್ ಶಾಖೆಯ ವಿದ್ಯಾರ್ಥಿನಿ ಅನನ್ಯ ಉಲ್ಲಾಸ್ ಅವರು 396/400 (ಶೇ.99) ಅಂಕ ಪಡೆದು ಮಂಗಳೂರು ಕೇಂದ್ರಕ್ಕೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಡಿ.ಪಿ.ಎಸ್. ಮಂಗಳೂರಿನ 8ನೇ ತರಗತಿಯ ವಿದ್ಯಾರ್ಥಿನಿ ಆಗಿರುವ ಇವರು ಸುರತ್ಕಲ್- ಹೊಸಬೆಟ್ಟುವಿನ ಸಿ.ಕೆ. ಉಲ್ಲಾಸ್ ಹಾಗೂ ಸ್ಮಿತಾ ಉಲ್ಲಾಸ್ ದಂಪತಿಯ ಸುಪುತ್ರಿ.
ಸಂಸ್ಥೆಯ ಮಂಗಳೂರು ಶಾಖೆಯ ವಿದ್ಯಾರ್ಥಿನಿ ನಿಹಿರಾ ರಾವ್ ಬಿ. ಅವರು 393/400 (ಶೇ.98.25) ಅಂಕಗಳೊಂದಿಗೆ ಮಂಗಳೂರು ಕೇಂದ್ರಕ್ಕೆ ದ್ವಿತೀಯ ಸ್ಥಾನ ಹಾಗೂ ರಾಜ್ಯದಲ್ಲಿ 6ನೇ ಸ್ಥಾನ ಪಡೆದಿದ್ದಾರೆ. ಶಾರದಾ ವಿದ್ಯಾಲಯ ಮಂಗಳೂರಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಉರ್ವದ ಡಾ.ಬಿ.ರಮಾನಂದ ರಾವ್ ಹಾಗೂ ಲಲಿತಾ ರಮಾನಂದ ರಾವ್ ದಂಪತಿಯ ಸುಪುತ್ರಿ.
ಇವರು ನಾಟ್ಯಾರಾಧನಾ ಕಲಾ ಕೇಂದ್ರದ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಉರ್ವ ಇವರ ಶಿಷ್ಯೆಯರು.