ವಿಟ್ಲ: ಡಿ.15ರಂದು ಸಮಸ್ತ ಮಹಾ ಸಮ್ಮೇಳನದ ಪ್ರಚಾರ ಸಭೆ, ಕಾಲ್ನಡಿಗೆ ರ್ಯಾಲಿ
ಬಂಟ್ವಾಳ, ಡಿ.12: ವಿಟ್ಲ ರೇಂಜ್ ಜಂಇಯ್ಯತುಲ್ ಮಹಲ್ಲಿಮೀನ್ ಮತ್ತು ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ 60ನೇ ವಾರ್ಷಿಕ ಮಹಾಸಮ್ಮೇಳನದ ಪ್ರಚಾರ ಸಭೆ, ಬೃಹತ್ ಕಾಲ್ನಡಿಗೆ ರ್ಯಾಲಿ ಹಾಗೂ ಸನ್ಮಾನ ಕಾರ್ಯಕ್ರಮ ಡಿ.15ರಂದು ವಿಟ್ಲ ಕೇಂದ್ರ ಜುಮಾ ಮಸೀದಿಯ ಆವರಣದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಮುಖಂಡ ಅಬ್ಬಾಸ್ ದಾರಿಮಿ ಕೆಲಿಂಜ ತಿಳಿಸಿದ್ದಾರೆ.
ಗುರುವಾರ ವಿಟ್ಲ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಮಧ್ಯಾಹ್ನ 2:30ಕ್ಕೆ ಐಬಿ ಹಾಲ್ನಿಂದ ವಿಟ್ಲ ಕೇಂದ್ರ ಜುಮಾ ಮಸೀದಿಯವರೆಗೆ ಆಕರ್ಷಕ ದಫ್ ರ್ಯಾಲಿ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಿನ್ಯಾ ಶಂಸುಲ್ ಉಲಮಾ ಇಸ್ಲಾಮಿಕ್ ಅಕಾಡಮಿಯ ಪ್ರಾಂಶುಪಾಲ ಸೈಯದ್ ಇಬ್ರಾಹಿಂ ಬಾತಿಷ ತಂಙಳ್ ದುಆ ಆಶೀರ್ವಚನ ನೀಡುವರು. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಮುಹಮ್ಮದ್ ಅಲಿ ಫೈಝಿ ಇರ್ಫಾನಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಟ್ಲ ವಿ.ಆರ್.ಜೆ.ಎಂ ಸ್ವಾಗತ ಸಮಿತಿ ಚೆಯರ್ಮೆನ್ ಅಬ್ದುಲ್ ಕರೀಂ ಕಂಪದಬೈಲು ಅಧ್ಯಕ್ಷತೆ ವಹಿಸಲಿದ್ದು, ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಎಸ್ಕೆಜೆಯು ಕೆಂದ್ರ ಮುಶಾವರದ ಸದಸ್ಯ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಅವರನ್ನು ಇದೇ ವೇಳೆ ಸನ್ಮಾನಿಸಲಾಗುವುದು. ಮಾಡನ್ನೂರು ದಾರುಲ್ ಹುದಾ ಇದರ ಪ್ರಾಂಶುಪಾಲ ಅಡ್ವಕೇಟ್ ಮುಹಮ್ಮದ್ ಹನೀಫಿ ಹುದವಿ ಮುಖ್ಯ ಭಾಷಣ ಮಾಡುವರು. ಡಿ. 27ರಿಂದ 29ರವರೆಗೆ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ 60ನೇ ವಾರ್ಷಿಕ ಮಹಾಸಮ್ಮೇಳನವು ಕೇರಳದ ಕೊಲ್ಲಂನಲ್ಲಿ ನಡೆಯಲಿದ್ದು, ವಿಟ್ಲ ರೇಂಜ್ನಿಂದ ಆರು ಸಾವಿರ ಮಂದಿ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಚೆಯರ್ಮೆನ್ ಅಬ್ದುಲ್ ಕರೀಂ ಕಂಪದಬೈಲು, ಶರೀಫ್ ಕುದ್ದುಪದವು, ಎಂ.ಎಸ್.ಹಮೀದ್ ಪುಣಚ ಉಪಸ್ಥಿತರಿದ್ದರು.