ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆಗೆ ಅನುಮತಿ ನಿರಾಕರಣೆ; ಡಿವೈಎಫ್ಐನಿಂದ ಖಂಡನಾ ಸಭೆ
ಉಳ್ಳಾಲ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮತ್ತು ಪೌರತ್ವ ನೋಂದಣಿ ಕಾಯ್ದೆಯ ವಿರುದ್ಧ ಡಿವೈಎಫ್ಐ ಹಾಗೂ ಪ್ರಗತಿಪರ ಸಂಘಟನೆಗಳು ಇಂದು ಮೊಂಟೆಪದವು ಜಂಕ್ಷನ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಗೆ ಅನುಮತಿ ನಿರಾಕರಿಸಿರುವ ಕೊಣಾಜೆ ಪೊಲೀಸ್ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಮೊಂಟೆಪದವು ಡಿವೈಎಫ್ಐ ಕಚೇರಿಯಲ್ಲಿ ಖಂಡನಾ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನೋಂದಣಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ನಾಡಿನ ಸಾಹಿತಿಗಳು ಹಾಗೂ ಪ್ರಜ್ಞಾವಂತರು ಈ ಕಾಯ್ದೆಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಮೊಂಟೆಪದವು ಜಂಕ್ಷನ್ ನಲ್ಲಿ ಇಂದು ಡಿವೈಎಫ್ಐ ಹಾಗೂ ಪ್ರಗತಿಪರ ಸಂಘಟನೆಗಳು ಕಾಯ್ದೆಯ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದವು. ಆದರೆ ಸರ್ಕಾರದ ಹಿಟ್ಲರ್ ನೀತಿಗೆ ಬೆಂಬಲ ಕೊಡುವಂತೆ ಇಲ್ಲಿನ ಪೊಲೀಸ್ ಇಲಾಖೆ ಪ್ರಜಾಪ್ರಭುತ್ವ ರೀತಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಅನುಮತಿ ನಿರಾಕರಿಸಿದೆ. ಇದನ್ನು ಡಿವೈಎಫ್ಐ ಖಂಡಿಸುತ್ತದೆ ಎಂದರು.
ವೇದಿಕೆಯಲ್ಲಿ ಸಿಪಿಐಎಂ ಮುಖಂಡರಾದ ಇಬ್ರಾಹಿಂ ಮದಕ, ಡಿವೈಎಫ್ಐ ಉಪಾಧ್ಯಕ್ಷ ರಝಾಕ್ ಮೊಂಟೆಪದವು , ಡಿವೈಎಫ್ಐ ಮೊಂಟೆಪದವು ಘಟಕದ ಅಧ್ಯಕ್ಷ ಸಿರಾಜ್ ಬಿ.ಎಂ ಕಾರ್ಯದರ್ಶಿ ಮುವಾದ್ ಮುನ್ನ , ಡಿಕೆಶಿ ಬಳಗದ ಅಶ್ರಫ್ , ಲತೀಫ್ , ಫ್ರೆಂಡ್ಸ್ ಮೊಂಟೆಪದವು ಸಂಘಟನೆಯ ಶಂಸುದ್ದೀನ್ ಯು ಟಿ, ಡಿವೈಎಫ್ಐ ಮುಖಂಡ ರಫೀಕ್ ಮೊಂಟೆಪದವು ಉಪಸ್ಥಿತರಿದ್ದರು.