ಮಂಗಳೂರು: ಋಣಮುಕ್ತ ಹೋರಾಟ ಸಮಿತಿಯಿಂದ ಸಂಸದರ ಭೇಟಿ
ಮಂಗಳೂರು, ಡಿ.14: ದ.ಕ. ಹಾಗೂ ಉಡುಪಿ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ವತಿಯಿಂದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಮೈಕ್ರೋಫೈನಾನ್ಸ್ ಸಾಲಮನ್ನಾ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ನೀಡಲಾಯಿತು.
ಮನವಿ ಸ್ವೀಕರಿಸಿದ ಸಂಸದರು ಈ ಬಗ್ಗೆ ಸರಕಾರದ ಗಮನಸೆಳೆಯುವೆ. ಮೈಕ್ರೋ ಫೈನಾನ್ಸ್ ಗಳ ದಬ್ಬಾಳಿಕೆಗಳ ವಿರುದ್ಧ ಧ್ವನಿ ಎತ್ತಲಿದ್ದೇನೆ ಮತ್ತು ಉಡುಪಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇನೆ ಎಂದು ಹೋರಾಟ ಸಮಿತಿಯ ಮುಖಂಡರಿಗೆ ಭರವಸೆ ನೀಡಿದರು.
ಈ ಸಂದರ್ಭ ದ.ಕ.ಜಿಲ್ಲೆಯ ಋಣಮುಕ್ತ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ, ನ್ಯಾಯವಾದಿ ಬಿ.ಎಂ.ಭಟ್, ಬೆಳ್ತಂಗಡಿಯ ಎಲ್.ಮಂಜುನಾಥ್, ಕಾರ್ಕಳ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಮಂಜುನಾಥ್ ಬೈಲೂರು, ಕಾಪು ಹೋರಾಟ ಸಮಿತಿಯ ಅಧ್ಯಕ್ಷೆ ಮಮತಾ ಆರ್, ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷೆ ಯೋಗಿತಾ, ಕಾರ್ಯದರ್ಶಿ ವಿದ್ಯಾ,ಉಡುಪಿ ಹೋರಾಟ ಸಮಿತಿಯ ಅಧ್ಯಕ್ಷೆ ಜಯಂತಿ ಕರ್ಕೇರಾ ಮತ್ತು ಮಂಗಳೂರಿನ ಉಷಾ, ಕೈರುನ್ನೀಸಾ ಹಾಗೂ 20ಕ್ಕೂ ಅಧಿಕ ಮಹಿಳಾ ಸಾಲ ಸಂತ್ರಸ್ತರು ಉಪಸ್ಥಿತರಿದ್ದರು.