ಬೆಟ್ಟಂಪಾಡಿ ಸ್ಪೋಟಕ ಸಿಡಿತ: ಗಾಯಾಳು ಮೃತ್ಯು
ಪುತ್ತೂರು: ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಸರಳಿಕಾನ ಎಂಬಲ್ಲಿ ಡಿ.5ರಂದು ರಾತ್ರಿ ನಡೆದ ಸಿಡಿಮದ್ದು ಸ್ಪೋಟಕ ಘಟನೆಯಿಂದ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
ಸರಳಿಕಾನ ನಿವಾಸಿ ಕೇಪು ಗೌಡ ಎಂಬವರ ಪುತ್ರ ಬಾಲಕೃಷ್ಣ ಗೌಡ ಮೃತಪಟ್ಟ ವ್ಯಕ್ತಿ. ಸಿಡಿಮದ್ದು ಸ್ಪೋಟಕವನ್ನು ಮನೆಯೊಳಗೆ ದಾಸ್ತಾನಿರಿಸಿದ್ದ ಬಾಲಕೃಷ್ಣ ಗೌಡರು ಅದನ್ನು ತೆಗೆಯುವ ವೇಳೆಯಲ್ಲಿ ಸ್ಪೋಟಗೊಂಡು ಗಂಭೀರ ಗಾಯಗೊಂಡಿದ್ದರು. ಅಲ್ಲದೆ ಮನೆಯಲಿದ್ದ ಅವರ ನಾದಿನಿ ವೇದಾವತಿ, ಅವರ ಪುತ್ರಿ ಮೋನಿಕಾ ಮತ್ತು ಕಾರ್ತಿಕ್ ಎಂಬವರಿಗೂ ಸಣ್ಣ ಪುಟ್ಟ ಗಾಯಗಳಾಗಿತ್ತು. ಗಂಭೀರ ಗಾಯಗೊಂಡಿದ್ದ ಬಾಲಕೃಷ್ಣ ಗೌಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದ ಗಾಯಾಳುಗಳು ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಬಾಲಕೃಷ್ಣ ಗೌಡ ಅವರ ಕೈ ಮತ್ತು ತೊಡೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.