ಭಟ್ಕಳ ಇಂಟರ್ ಸ್ಕೂಲ್ ಸೈನ್ಸ್ ಫೇರ್ ಗೆ ಸಾಜಿದ್ ಮುಲ್ಲಾ ಚಾಲನೆ
ಭಟ್ಕಳ: ತರಬಿಯತ್ ಎಜ್ಯುಕೇಶನ್ ಸೂಸೈಟಿ ಹಾಗೂ ರಾಯಚೂರಿನ ಎ.ಜೆ.ಅಕಾಡೆಮಿ ಇಲ್ಲಿನ ಜಾಮಿಯಬಾದ್ ರಸ್ತೆಯಲ್ಲಿನ ನ್ಯೂ ಶಮ್ಸ್ ಸ್ಕೂಲ್ ನಲ್ಲಿ ಆಯೋಜಿದ್ದ ಭಟ್ಕಳ ಇಂಟರ್ ಸ್ಕೂಲ್ ಸೈನ್ಸ್ ಫೇರ್ ಗೆ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ ಚಾಲನೆ ನೀಡಿದರು.
ನಂತರ ಉದ್ಘಾಟನಾ ಭಾಷಣ ಮಾಡಿದ ಅವರು ವಿಜ್ಞಾನ ಮನುಷ್ಯನಿಗೆ ಯೋಚಿಸುವುದನ್ನು ಕಲಿಸುತ್ತದೆ. ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ಸತ್ಯ ಅಸತ್ಯಗಳ ಅರಿವಾಗುತ್ತದೆ ಎಂದರು. ವಿವಿಧ ಹಂತದಲ್ಲಿ ವಿಜ್ಞಾನ ವಿಷಯಗಳನ್ನು ಅರಿತು ಬದುಕು ಸಾಗಿಸಲು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸೈನ್ಸ್ ಫೇರ್ ಕುರಿತಂತೆ ಎ.ಜೆ.ಅಕಾಡೆಮಿಯ ನಿರ್ದೆಶಕ ಮುಹಮ್ಮದ್ ಅಬ್ದುಲ್ಲಾ ಜಾವಿದ್ ಮಾತನಾಡಿ ವಿಜ್ಞಾನ ವಸ್ತುಪ್ರದರ್ಶನ ಮತ್ತು ಸೈನ್ಸ್ ಫೇರ್ ಗಳಲ್ಲಿನ ವ್ಯತ್ಯಾಸವನ್ನು ತಿಳಿಸುತ್ತ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ವಸ್ತುಪ್ರದರ್ಶನಕ್ಕೆ ಮಹತ್ವ ಇಲ್ಲ ಸೈನ್ಸ್ ಫೇರ್ ಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ ಹಂತದಿಂದಲೆ ಸಂಶೋಧನೆ ಕೈಗೊಳ್ಳುವು ಪ್ರತಿಭೆಗಳನ್ನು ಬೆಳೆಸಲಾಗುತ್ತಿದ್ದು ಆದ್ದರಿಂದಲೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸೈನ್ಸ್ ಫೇರ್ ಗಳು ಮಹತ್ವ ಪಡೆದುಕೊಳ್ಳುತ್ತಿವೆ ಎಂದರು.
ಭಟ್ಕಳ ಸೈನ್ಸ್ ಫೇರ್ ಸಂಯೋಜಕ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವೀಣಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಉಪಾಧ್ಯಕ್ಷ ನಝೀರ್ ಅಹ್ಮದ್ ಖಾಝಿ, ಪ್ರಧಾನ ಕಾರ್ಯದರ್ಶಿ ಮೌಲಾನ ಝೀಯಾವುರ್ರಹ್ಮಾನದ್ ನದ್ವಿ ರುಕ್ನುದ್ದೀನ್ ಹಾಗೂ ಆಡಳಿತ ಮಂಡಳಿಯ ಸದಸ್ಯ ಮೌಲಾನ ಸೈಯ್ಯದ್ ಝಬೇರ್ ಎಸ್.ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕಿನ 11 ಶಾಲೆಗಳಿಂದ 40ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳು ಹಾಗೂ 150 ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿದ್ದರು.