ಕಡಬ: ವಿದ್ಯಾರ್ಥಿನಿಗೆ ಕಿರುಕುಳ ; ಆರೋಪಿ ಸೆರೆ
ಕಡಬ: ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಸರಕಾರಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ನಡೆದಿದ್ದು, ಈ ಬಗ್ಗೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಶಿವರಾಮ್ ಎಂದು ಗುರುತಿಸಲಾಗಿದೆ.
ಡಿ.14 ರಂದು ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಹೋಗುತ್ತಿದ್ದ ವೇಳೆ ಆರೋಪಿ ವಿದ್ಯಾರ್ಥಿನಿಯನ್ನು ಪಕ್ಕದ ಪೊದೆಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಬಾಲಕಿ ಕೂಗಿಕೊಂಡಾಗ ಕೊಲೆಗೈಯಲು ಯತ್ನಿಸಿದ ಬಗ್ಗೆ ತಿಳಿದುಬಂದಿದೆ.
ಶಾಲೆಯಿಂದ ಅದೇ ದಾರಿಯಲ್ಲಿ ಮಕ್ಕಳ ಗುಂಪೊಂದು ಬರುತ್ತಿರುವುದನ್ನು ಕಂಡು ಆರೋಪಿ ವಿದ್ಯಾರ್ಥಿನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಬಾಲಕಿ ಕಡಬ ಠಾಣೆಗೆ ದೂರು ನೀಡಿದ್ದು, ಆರೋಪಿ ಶಿವರಾಮ್ ಎಂಬಾತನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ಊರಿನವರಿಂದ ಮನವಿ: ದೇಶದೆಲ್ಲೆಡೆ ದಿನ ನಿತ್ಯ ಕೇಳಿ ಬರುತ್ತಿರುವ ಅತ್ಯಾಚಾರ ಪ್ರಕರಣಗಳು ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ದೋಳ್ಪಾಡಿ ಶಾಲೆಯ ವಿದ್ಯಾರ್ಥಿನಿಯನ್ನು ಹಾಡುಹಗಲೇ ನಡುರಸ್ತೆಯಲ್ಲಿ ಅತ್ಯಾಚಾರ ಯತ್ನಿಸಿದ ಆರೋಪಿ ಎಷ್ಟೇ ಪ್ರಭಾವಿತನಾದರು ಆತನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ದೋಳ್ಪಾಡಿಯ ಗ್ರಾಮಸ್ಥರು ಹಾಗೂ ಹಲವು ಸಂಘಟನೆಗಳ ಪ್ರಮುಖರು ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿ, ಕಡಬ ಠಾಣೆಗೆ ಮನವಿ ನೀಡಿದ್ದಾರೆ.