ಪರಿಹಾರ ಕೊಟ್ಟು ಪ್ರಚೋದನೆ ಆಗಬಾರದು: ಸಿ.ಟಿ.ರವಿ
ಮಂಗಳೂರು ಗೋಲಿಬಾರ್ ಪ್ರಕರಣ
ಮೂಡುಬಿದಿರೆ, ಡಿ.26: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಪೂರ್ವನಿಯೋಜಿತ ಕೃತ್ಯ. ಇಂತಹ ಘಟನೆಗಳ ಸಂದರ್ಭ ಸಾವನ್ನಪ್ಪಿದವರಿಗೆ ಪರಿಹಾರ ಕೊಡುವುದು ಗಲಭೆಕೋರರಿಗೆ, ಕುಮ್ಮಕ್ಕು ನೀಡುವವರಿಗೆ ಪ್ರಚೋದನೆಯಾಗಬಾರದು. ಅದೇರೀತಿ ಪರಿಹಾರ ಕೊಟ್ಟರೆ ಅದು ಇದು ಪೊಲೀಸರ ನೈತಿಕ ಸ್ಥೈರ್ಯವನ್ನೂ ಕುಗ್ಗಿಸುತ್ತದೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಮೂಡುಬಿದಿರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಗೋಲಿಬಾರ್ ಸಂತ್ರಸ್ತರಿಗೆ ಘೋಷಿಸಿದ್ದ ಪರಿಹಾರವನ್ನು ಸರಕಾರ ವಾಪಸ್ ಪಡೆದಿರುವ ಕುರಿತಂತೆ ಮಾಧ್ಯಮವದವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಗಲಭೆ ಉಂಟು ಮಾಡುವ ಉದ್ದೇಶದಿಂಲೇ ಪಿತೂರಿ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ. ಪೊಲೀಸರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ ಗಲಭೆ ನಿಯಂತ್ರಣಕ್ಕೆ ಬಂತು. ಗಲಭೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು 144 ಸೆಕ್ಷನ್, ಬಂದೋಬಸ್ತ್ ಗಳನ್ನು ಕಲ್ಪಿಸಿದ್ದರು. ಇಲ್ಲವಾಗಿದ್ದರೆ ಭಾರೀ ಪ್ರಮಾಣದ ಅನಾಹುತವೇ ನಡೆಯುತ್ತಿತ್ತು ಎಂದು ಸಿ.ಟಿ.ರವಿ ನುಡಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗೋಲಿಬಾರ್ಗೆ ಬಲಿಯಾದವರು ಅಮಾಯಕರಲ್ಲ ಎಂಬುದನ್ನು ಅಂದಿನ ಸಿಸಿಟಿವಿ ದೃಶ್ಯಾವಳಿಗಳು ಹೇಳುತ್ತವೆ ಎಂದರು.