ಜ. 1ರಂದು ಕಣ್ಣಂಗಾರಿನಲ್ಲಿ ಸಮಸ್ತ ಶೈಕ್ಷಣಿಕ ಸಮ್ಮೇಳನ
ಪಡುಬಿದ್ರಿ: ಉಡುಪಿ ಜಿಲ್ಲೆಯನ್ನು ಕೇಂದ್ರೀಕರಿಸಿಕಂಡು ಕಾರ್ಯಾಚರಿಸುತ್ತಿರುವ ಶಂಸುಲ್ ಉಲಮಾ ಅಕಾಡೆಮಿ ಆಫ್ ಇಸ್ಲಾಮಿಕ್ ಆ್ಯಂಡ್ ಜನರಲ್ ಎಜ್ಯುಕೇಶನ್ ಪಡುಬಿದ್ರಿ ಇದರ ಒಂಬತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಒಂದು ದಿನದ ಸಮಸ್ತ ಶೈಕ್ಷಣಿಕ ಸಬಲೀಕರಣದತ್ತ ಸಮುದಾಯ ಧ್ಯೇಯ ವಾಕ್ಯದೊಂದಿಗೆ ಸಮಸ್ತ ಶೈಕ್ಷಣಿಕ ಮಹಾಸಮ್ಮೇಳನವು ಹೆಜಮಾಡಿಯ ಕಣ್ಣಂಗಾರ್ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಜ.1ರಂದು ಸಂಜೆ 6.30ಕ್ಕೆ ನಡೆಯಲಿದೆ.
ಅಂದು ಬೆಳಗ್ಗೆ 9.30ಕ್ಕೆ ಸಮ್ಮೇಳನ ಕ್ರೀಡಾಂಗಣದಲ್ಲಿ ಧ್ವಜಾರೋಹಣದೊಂದಿಗೆ ಸಮ್ಮೇಳನ ಆರಂಭಗೊಳ್ಳಲಿದ್ದು, ಸಂಜೆ 6.30ಕ್ಕೆ ಕುಂಬೋಳ್ ಕೆ.ಎಸ್.ಆಲಿ ತಂಙಳ್ ನೇತೃತ್ವದಲ್ಲಿ ಮಜ್ಲಿಸುನ್ನೂರು ಕಾರ್ಯಕ್ರಮ ನಡೆಯಲಿದ್ದು, ಸಂಜೆ 7.30ಕ್ಕೆ ದಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಬೊಳ್ಳೂರು ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಅಝ್ಹರ್ ಫೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆತ್ರಾಡಿ ಖಾಝಿ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ದುವಾ ನೆರವೇರಿಸಲಿದ್ದು, ಕಾಪು ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್, ಕೆಎಂಡಿಸಿ ಉಡುಪಿ ಜಿಲ್ಲಾ ವ್ಯವಸ್ಥಾಪಕ ಮುಹಮ್ಮದ್ ಸಫ್ವಾನ್, ಜಿಲ್ಲಾ ಕ್ರೀಡಾ ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ಅಝ್ಮತ್ ಆಲಿ, ಮಣಿಪಾಲ ಕೆಎಂಸಿ ಹೃದ್ರೋಗ ವಿಭಾಗದ ಡಾ. ಯು.ಕೆ. ಅಬ್ದುಲ್ ರಝಾಕ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಸೇರಿದಂತೆ ಉಡುಪಿ ಮತ್ತು ದಕ ಜಿಲ್ಲೆಯ ಸಾಮಾಜಿಕ, ಧಾರ್ಮಿಕ ನೇತಾರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ಮುಖ್ಯ ಪ್ರಭಾಷಣಕಾರರಾಗಿ ಹಾಫಿಳ್ ಸಿರಾಜುದ್ದೀನ್ ಅಲ್ಖಾಸಿಮಿಯವರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿವಿಧ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಮಹಾಸಮ್ಮೇಳನಕ್ಕೆ 1200 ಚರದ ಅಡಿಯ ವೇದಿಕೆ ಸಿದ್ಧವಾಗಿದ್ದು, 10ಸಾವಿರಕ್ಕೂ ಅಧಿಕ ಮಂದಿ ಭಾಗವಹಿ ಸುವ ನಿರೀಕ್ಷೆ ಇದ್ದು, ಮಹಿಳೆಯರಿಗೆ ಪ್ರತ್ಯೇಕವಾದ ಸ್ಥಳಾವಕಾಶ ಏರ್ಪಡಿಸಲಾಗಿದ್ದು, ಸಮ್ಮೇಳನದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಶಂಸುದ್ದೀನ್ ಲಚ್ಚಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಾಹನ ನಿಲುಗಡೆ ಕಾನೂನು ಸುವ್ಯವಸ್ಥೆ ಪಾಲನೆ, ಸ್ವಚ್ಚತೆಗೆ ವಿಶೇಷ ಗಮನವನ್ನು ಹರಿಸಿದ್ದು, ಎಸ್ಕೆಎಸ್ಎಸ್ಎಫ್ ಸಂಘಟನೆಯ ಸುಮಾರು 200ಕ್ಕೂ ಅಧಿಕ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದು, ಪೊಲೀಸ್ ಇಲಾಖೆ ಯೊಂದಿಗೆ ಸಹಕರಿಸಲಿದ್ದಾರೆ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕ ರನ್ನು ಸಮ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿ ಸಮುದಾಯದ ಎಲ್ಲಾ ನೇತಾರರನ್ನು ಒಂದೆಡೆ ಸೇರಿಸಿ ಶೈಕ್ಷಣಿಕ ರಂಗದಲ್ಲಿ ಸಮುದಾಯ ವನ್ನು ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಈ ಸಮ್ಮೇಳನ ಇಡೀ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಕ ಮುನ್ನುಡಿ ಬರೆಯಲಿದೆ ಎಂದು ಅವರು ತಿಳಿಸಿದರು.