ಕುಮಾರಸ್ವಾಮಿ ಬಿಡುಗಡೆ ಮಾಡಿದ ವೀಡಿಯೊ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ: ದ.ಕ ಜಿಲ್ಲಾ ಜೆಡಿಎಸ್
ಸಿಡಿ ಬಿಡುಗಡೆ ಬಗ್ಗೆ ಪೊಲೀಸ್ ಆಯುಕ್ತರ ಹೇಳಿಕೆಗೆ ಆಕ್ರೋಶ
ಮಂಗಳೂರು, ಜ.13: ಮಂಗಳೂರು ಹಿಂಸಾಚಾರ-ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ಬಿಡುಗಡೆ ಮಾಡಿದ ಸಿಡಿಯು ಶೆ.100ರಷ್ಟು ಸತ್ಯವಾಗಿದೆ. ಆದರೆ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ‘ಸಿಡಿ ಅಪೂರ್ಣ’ ಎಂದು ಹೇಳಿಕೆ ನೀಡುವುದು ಸರಿಯಲ್ಲ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮುಹಮ್ಮದ್ ಕುಂಞಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತಾಂಡವವಾಡುತ್ತಿರವ ಸಮಸ್ಯೆಗಳನ್ನು ರಾಜ್ಯ ಸರಕಾರದ ಗಮನಕ್ಕೆ ತರುವುದು ವಿರೋಧ ಪಕ್ಷಗಳ ಕರ್ತವ್ಯ. ಈ ಕೆಲಸವನ್ನು ಜೆಡಿಎಸ್ ಮಾಡಿದೆ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವೀಡಿಯೊ ಅಪೂರ್ಣ ಎನ್ನುವುದಾದರೆ ನ್ಯಾಯಾಂಗ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರ ಮೂಲಕ ‘ಸಿಡಿ ಅಪೂರ್ಣ’ ಹೇಳಿಕೆ ಕೊಡಿಸಲು ಮುಂದಾಗಿದೆ. ಸರಕಾರವು ಎಲ್ಲವನ್ನೂ ಪೊಲೀಸರ ಮೂಲಕವೇ ಹತ್ತಿಕ್ಕುವ ಹುನ್ನಾರದಲ್ಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸೇರಿದ್ದ ನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ಅಂದು ಡಾ.ಹರ್ಷ ಹಾಗೂ ದಯಾನಂದ ಯಶಸ್ವಿಯಾಗಿ ನಿಭಾಯಿಸಿದ್ದರು. ಆದರೆ ಮಂಗಳೂರು ಘಟನೆಯಲ್ಲಿ ಕಮಿಷನರ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜಕೀಯ ಮಾಡುತ್ತಿಲ್ಲ. ನ್ಯಾಯಯುತ ತನಿಖೆಗೆ ಆಗ್ರಹಿಸುತ್ತದೆ. ಸಿಡಿ ಬಿಡುಗಡೆಯ ಹಿಂದೆ ಯಾವುದೇ ವೋಟ್ಬ್ಯಾಂಕ್ ವಿಷಯವಿಲ್ಲ. ಇಂತಹ ವಿಷಯಗಳನ್ನು ಪಕ್ಷವು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ದ.ಕ. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯ ಅಗತ್ಯವಿದೆ. ಆದರೆ ಸದ್ಯದ ವಾತಾವರಣವು ಭಯ-ಭೀತಿಯಿಂದ ಕೂಡಿದೆ. ಜಿಲ್ಲಾಡಳಿತವು ಸಂಪೂರ್ಣವಾಗಿ ಕುಸಿತ ಕಂಡಿದೆ. ಪ್ರಾಮಾಣಿಕ ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅಂಥವರು ರಾಜೀನಾಮೆ ಕೊಡುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿದರು.
ಜಿಲ್ಲಾ ತುರ್ತು ಪರಿಹಾರ ಕೇಂದ್ರದ ಖಜಾನೆಯಲ್ಲಿ ನಯಾಪೈಸೆ ಇಲ್ಲ. ಹೊಸ ಸರಕಾರ ಬಂದರೂ ಯಾವುದೇ ನೂತನ ಯೋಜನೆಗಳನ್ನು ಘೋಷಿಸುತ್ತಿಲ್ಲ. ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ನೀಡುತ್ತಿದ್ದ ಅನುದಾನದಲ್ಲೂ ಭಾರೀ ಕುಸಿತ ಕಂಡಿದೆ. ಒಂದೊಂದು ರೂಪಾಯಿಗೆ ಕೈಒಡ್ಡಿ ನಿಲ್ಲುವ ಪರಿಸ್ಥಿತಿ ಇದೆ. ರಾಜ್ಯದಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿದ ಬಿಜೆಪಿಯು ಮುಂದಿನ ಸಂಪುಟ ವಿಸ್ತರಣೆ ಬಳಿಕ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದರು.
ಜೆಡಿಎಸ್ ಪದಾಧಿಕಾರಿ ನೇಮಕ: ರಾಜ್ಯದಾದ್ಯಂತ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಮಾಡಲಾಗುವುದು. ಈ ಬಗ್ಗೆ ಸಮಿತಿ ರಚನೆ ಮಾಡಲಾಗಿದೆ. ವೈಯಕ್ತಿಕ ಕಾರಣದಿಂದ ನಾನು ರಾಜೀನಾಮೆ ಸಲ್ಲಿಸಿದ್ದೇನೆ. ತನ್ನ ರಾಜೀನಾಮೆಯನ್ನು ವರಿಷ್ಠರು ರದ್ದುಗೊಳಿಸಿ ಮುಂದುವರಿಯಲು ಸೂಚಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮುಹಮ್ಮದ್ ಕುಂಞಿ ಉತ್ತರಿಸಿದರು.
ಸುದ್ದಿಗೋಷ್ಠಿಗೆ ಅನುಮತಿ ನಿರಾಕರಿಸಿದ್ದ ಪೊಲೀಸ್: ನಗರದ ವುಡ್ಲ್ಯಾಂಡ್ನಲ್ಲಿ ಸುದ್ದಿಗೋಷ್ಠಿ ನಡೆಸಲು ಇನ್ಸ್ಪೆಕ್ಟರ್ ಗೋವಿಂದರಾಜು ಅವರಿಗೆ ಕರೆ ಮಾಡಿದಾಗ ಅನುಮತಿ ನೀಡಲು ಹಿಂಜರಿದರು. ಬಳಿಕ ಪೊಲೀಸ್ ಆಯುಕ್ತರಿಗೆ ಮನವರಿಕೆ ಮಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಲು ಅನುಮತಿ ಸಿಕ್ಕಿತು. ಇತ್ತೀಚೆಗೆ ‘ಜನತಾ ಅದಾಲತ್’ ನಡೆಸಲು ಬಂದಿದ್ದ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರಿಗೂ ಸುದ್ದಿಗೋಷ್ಠಿ ನಡೆಸಲು ಅನುಮತಿ ನಿರಾಕರಿಸಲಾಗಿತ್ತು. ಸಂವಿಧಾನ ಬದ್ಧ ವಾಕ್ ಸ್ವಾತಂತ್ರವನ್ನು ಮೊಟಕುಗೊಳಿಸುತ್ತಿರುವುದು ಸಲ್ಲದು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮುಹಮ್ಮದ್ ಕುಂಞಿ ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಝೀಝ್ ಕುದ್ರೋಳಿ, ಸುಶಿಲ್ ನರೋನ್ಹ, ಅಕ್ಷಿತ್ ಸುವರ್ಣ, ಸುಮತಿ ಹೆಗಡೆ ಉಪಸ್ಥಿತರಿದ್ದರು.