ಅಡ್ಯಾರ್ ಕಣ್ಣೂರ್ ಚಳುವಳಿಗೆ ಪೂರ್ಣ ಬೆಂಬಲ: ಫಾರೂಕ್ ಉಳ್ಳಾಲ
ಉಳ್ಳಾಲ: ಅಡ್ಯಾರ್ ಕಣ್ಣೂರಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಬುಧವಾರ ನಡೆಯುವ ಅಸಹಕಾರ ಚಳವಳಿಗೆ ಪೂರ್ಣ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ದ.ಕ. ಜಿಲ್ಲಾ ಪೌರ ಸಮನ್ವಯ ಸಮಿತಿ ಸಂಚಾಲಕ ಫಾರೂಕ್ ಉಳ್ಳಾಲ ಹೇಳಿದರು.
ತೊಕ್ಕೊಟ್ಟುನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲರೂ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿ ಈ ಅಸಹಕಾರ ಚಳವಳಿಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಕೇಂದ್ರದ ಎನ್ ಆರ್ ಸಿ ಕರಾಳ ಕಾಯ್ದೆಯಿಂದ ಜನರಲ್ಲಿ ಮೂಡಿರುವ ಆತಂಕವನ್ನು ದೂರ ಮಾಡುವ ದೃಷ್ಟಿ ಯಿಂದ
ಎಲ್ಲ ಜಾತಿ, ಧರ್ಮದವರನ್ನು ಒಗ್ಗೂಡಿಸಿ ಭೀತಿ ಸೃಷ್ಟಿಸಿದ ಮಸೂದೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಈ ಮಸೂದೆ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಬರೆದ ಮಾಹಿತಿ ಕೈಪಿಡಿಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಕರಾಳ ಮಸೂದೆಯ ಬಗ್ಗೆ ಉಳ್ಳಾಲ ಸಮನ್ವಯ ಸಮಿತಿ ವಿಧ್ವಾಂಸರನ್ನು ಕರೆದು ಅವರ ಜತೆ ವಿಚಾರ ಗೋಷ್ಟಿ ನಡೆಸಲಿದೆ. ಅಲ್ಲದೇ ಹಿರಿಯ ರಾಜಕಾರಣಿಗಳನ್ನು ಕರೆದು ಚರ್ಚೆ ಕೂಡಾ ಮಾಡಲಿದ್ದೇವೆ ಎಂದು ಫಾರೂಕ್ ಉಳ್ಳಾಲ ಹೇಳಿದರು.
ಖಂಡನೆ : ದೇರಳಕಟ್ಟೆಯಲ್ಲಿ ರವಿವಾರ ಎನ್ ಆರ್ ಸಿ ವಿರುದ್ಧ ಪ್ರತಿಭಟನೆ ನಡೆದ ಬಳಿಕ ವಾಹನ ದಲ್ಲಿ ತುಂಬಿಸಿಟ್ಟಿದ್ದ ಕುರ್ಚಿಗಳಿಗೆ ಬೆಂಕಿ ಹಚ್ಚುವ ಕೃತ್ಯ ನಡೆದಿದೆ. ಇದರಿಂದ ಸುಮಾರು 25 ಲಕ್ಷ ನಷ್ಟ ಉಂಟಾಗಿದೆ. ಕೃತ್ಯ ಎಸಗಿದ ದುಷ್ಕರ್ಮಿಗಳ ಪತ್ತೆ ಆಗಬೇಕು. ಆರೋಪಿ ಗಳನ್ನು ಪತ್ತೆ ಮಾಡುವಂತೆ ಒತ್ತಾಯಿಸಿ ಎಸಿಪಿ ಕೊದಂಡರಾಮರಿಗೆ ಮನವಿ ಮಾಡಿದ್ದೇವೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ಪೌರ ಸಮನ್ವಯ ಸಮಿತಿ ಅಧ್ಯಕ್ಷ ಯೂಸುಫ್ ಉಳ್ಳಾಲ, ಅಕ್ರಮ್, ನಝೀರ್ ಉಳ್ಳಾಲ,ಅಶ್ರಫ್ ಕೋಡಿ, ಅಶ್ರಫ್ ಬಾವ , ಹಮೀದ್ ಉಳ್ಳಾಲ, ಅಶ್ರಫ್, ಯು ಎಚ್ ಫಾರೂಕ್, ಇಬ್ರಾಹಿಂ ತವಕ್ಕಲ್, ಮುಸ್ತಫಾ ಎವರೆಸ್ಟ್, ಲತೀಫ್ ಉಳ್ಳಾಲ ಉಪಸ್ಥಿತರಿದ್ದರು.