ಕಲಾವಿದನ ಬದುಕಿನ ಕುರಿತ ‘ಆಯ್ರಾ’ ಸಿನೆಮಾ ಚಿತ್ರೀಕರಣ
ಉಡುಪಿ, ಜ.14: ಉಡುಪಿಯ ಚಿತ್ರ ಕಲಾವಿದ ವೆಂಕಿ ಪಲಿಮಾರು ಅವರ ಬದುಕಿನಿಂದ ಸ್ಪೂರ್ತಿ ಪಡೆದು ನಿರ್ಮಾಣ ವಾಗುತ್ತಿರುವ ‘ಆಯ್ರಾ’ ಕನ್ನಡ ಚಲನಚಿತ್ರದ ಚಿತ್ರೀಕರಣವು ಇದೀಗ ಶೇ.80ರಷ್ಟು ಪೂರ್ಣಗೊಂಡಿದ್ದು, ಆರು ತಿಂಗಳೊಳಗೆ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ ಸಚಿನ್ ಬಾಡ ತಿಳಿಸಿದ್ದಾರೆ.
ಉಡುಪಿ ಚಿತ್ರಕಲಾ ಮಂದಿರದಲ್ಲಿ ಸೋಮವಾರ ನಡೆದ ಸಿನೆಮಾದ ಚಿತ್ರೀಕರಣದ ಸಂದರ್ಭದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾವಿದನೊಬ್ಬನ ಜೀವನ ವೃತ್ತಾಂತ ಒಳಗೊಂಡ ವಿಶಿಷ್ಟ ಪ್ರೇಮಕಥೆಯನ್ನು ಈ ಚಿತ್ರ ಒಳಗೊಂಡಿದೆ. ಪಲಿಮಾರು, ಪಡುಬಿದ್ರಿ, ಉಡುಪಿಯಲ್ಲಿ ಬಹು ತೇ ಚಿತ್ರಿಕರಣ ನಡೆಸಲಾಗಿದೆ ಎಂದರು.
ಓಂ ಸಾಯಿ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಐದು ಹಾಡುಗಳು, ಸಾಹಸ ದೃಶ್ಯಗಳಿವೆ. ಮೂಲತಃ ಪಡುಬಿದ್ರೆಯವರಾದ ರಮೇಶ್ ನಾಯಕ್ ನಾಯಕ ನಟ ಹಾಗೂ ಬೆಂಗಳೂರಿನ ಸಂಜನಾ ಚಿತ್ರದ ನಾಯಕಿ ಆಗಿದ್ದಾರೆ. ನಮ್ಮ ತಂಡವು ಈ ಹಿಂದೆ ಭೂತಕಾಲ ಎಂಬ ಚಿತ್ರ ನಿರ್ಮಿಸಿದ್ದು, ಅದೇ ತಂಡ ಈ ಚಿತ್ರವನ್ನು ನಿರ್ಮಿಸುತ್ತಿದೆ. ಇದಕ್ಕೆ ಸುಮಾರು ಎರಡು ಕೋಟಿ ರೂ. ವ್ಯಯವಾಗಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಾಯಕ ನಟ ರಮೇಶ್ ನಾಯ್ಕ, ನಟಿ ಸಂಜನಾ, ಹಾಸ್ಯ ನಟ ಭಟ್ರಳ್ಳಿ ಧನಂಜಯ, ಛಾಯಗ್ರಾಹಕ ಶಿವರಾಜ್ ಹಾಜರಿದ್ದರು.