ಜ.20ರಂದು ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರೋಧಿಸಿ ಪ್ರತಿಭಟನಾ ಸಮಾವೇಶ
ಕಾಪು, ಜ.17: ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ಕಾಯಿದೆಯ ವಿರುದ್ಧ ಉಡುಪಿ ನಾಗರಿಕ ಹಕ್ಕು ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶವನ್ನು ಜ.20 ರಂದು ಮಧ್ಯಾಹ್ನ 3:30ಕ್ಕೆ ಕಟಪಾಡಿ ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾಪು ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಎಸ್ಎಫ್ ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ, ಈ ಸಮಾವೇಶವನ್ನು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಅಲ್ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದ್ ಉದ್ಘಾ ಟಿಸಲಿರುವರು ಎಂದರು.
ಮುಖ್ಯ ಭಾಷಣಕಾರರಾಗಿ ಕೆ.ಎಂ.ಸಿದ್ದೀಕ್ ಮೋಂಟುಗೋಳಿ, ಸುಧೀರ್ ಕುಮಾರ್, ಮಧುಸೂದನ್ ಗೌಡ ಹಾಗೂ ಪ್ರಗತಿಪರ ಹೋರಾಟಗಾರರು, ಚಿಂತಕರು ಭಾಗವಹಿಸಲಿರುವರು. ಈ ಸಮಾವೇಶಕ್ಕೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಹಾಜಿ ಪಿ.ಅಬೂಬಕ್ಕರ್, ಸುನ್ನೀ ಅಧ್ಯಾಪಕರ ಒಕ್ಕೂಟದ ಕಾರ್ಯದರ್ಶಿ ಇಬ್ರಾಹಿಂ ನಯೀಮಿ ಹಾಜರಿದ್ದರು.