ಜ.19ರಂದು ಕೃತಕ ಕೈ ಜೋಡಣಾ ಶಿಬಿರ
ಉಡುಪಿ, ಜ.17: ಉಡುಪಿ-ಮಣಿಪಾಲ ರೋಟರಿ ಕ್ಲಬ್ ವತಿಯಿಂದ ರೋಟರಿ ಕ್ಲಬ್ ಪೂನಾ ಡೌನ್ ಟೌನ್ ಸಹಯೋಗದಲ್ಲಿ ಹಸ್ತವಿಲ್ಲದವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಎಲ್ಎನ್-4 ಕ್ರಿಯಾತ್ಮಕ ಪ್ರಾಸ್ತೆಟಿಕ್ ಕೃತಕ ಕೈ ಜೋಡಣಾ ಶಿಬಿರವನ್ನು ಜ.19ರಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಓಪಿಡಿ ಆವರಣದಲ್ಲಿ ಆಯೋಜಿಸಲಾಗಿದೆ.
ಅಪಘಾತ, ಹುಟ್ಟಿನಿಂದ/ಕಾಯಿಲೆ ಕಾರಣಗಳಿಂದ ಮೊಣ ಕೈಯಿಂದ ಕೆಳಗಿನ ಭಾಗವನ್ನು ಕಳೆದುಕೊಂಡವರಿಗೆ ಎಲ್ಎನ್-4 ಕ್ರಿಯಾತ್ಮಕ ಪ್ರಾಸ್ತೆಟಿಕ್ ಕೃತಕ ಕೈ ಜೋಡಿಸಲಾಗುವುದು ಎಂದು ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ನ ಅಧ್ಯಕ್ಷ ರಾಜವರ್ಮ ಅರಿಗ ತಿಳಿಸಿದರು.
ಉಡುಪಿ, ದ.ಕ. ಜಿಲ್ಲೆಯ 34 ಮಂದಿ ಸೇರಿದಂತೆ ರಾಜ್ಯದ 500ಕ್ಕೂ ಅಧಿಕ ಮಂದಿ ಇದರಲ್ಲಿ ನೊಂದಾಯಿಸಿಕೊಂಡಿದ್ದು, ಈ ಶಿಬಿರಕ್ಕಾಗಿ ಪೂನಾದಿಂದ 20 ಮಂದಿ ವೈದ್ಯರು ಆಗಮಿಸಲಿದ್ದಾರೆ. ಒಂದು ಕೈಗೆ 35 ಸಾವಿರ ರೂ. ವೆಚ್ಚ ತಗಲಿದೆ. ಶಿಬಿರದ ವೆಚ್ಚವನ್ನು ರೋಟರಿ ಕ್ಲಬ್ ಹಾಗೂ ಇನ್ನಿತರ ದಾನಿಗಳು ವಹಿಸಲಿದ್ದು, ಕೆಎಂಸಿ ಆಸ್ಪತ್ರೆಯ ಸಹಕಾರದಲ್ಲಿ ಉಚಿತವಾಗಿ ದೊರೆಯಲಿದೆ ಎಂದರು.
ಜ.19ರಂದು ಬೆಳಗ್ಗೆ 9 ಗಂಟೆಗೆ ನಡೆಯುವ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ರೋಟರಿ ಜಿಲ್ಲೆ 3182 ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ಶಿಬಿರದ ಸಂಯೋಜಕಿ ಡಾ.ಗಿರಿಜಾ ರಾವ್ ಭಾಗವಹಿಸಲಿರುವು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ನ ಪ್ರಮುಖರಾದ ಅಮಿತ್ ಅರವಿಂದ್ ನಾಯಕ್, ರೇಣು ಜಯರಾಮ್, ಡಾ.ವಿರೂಪಾಕ್ಷ ದೇವರಮನೆ, ರವಿ ಕಾರಂತ್ ಉಪಸ್ಥಿತರಿದ್ದರು