ಪತ್ರಕರ್ತ ಮನೋಹರ ಪ್ರಸಾದ್ಗೆ ಕರಾವಳಿ ಗೌರವ ಪ್ರಶಸ್ತಿ
ಮಂಗಳೂರು, ಜ. 17: ದ.ಕ. ಜಿಲ್ಲಾಡಳಿತದ ವತಿಯಿಂದ ನಡೆಯುವ ಕರಾವಳಿ ಉತ್ಸವ ಸಂದರ್ಭ ನೀಡಲಾಗುವ ಕರಾವಳಿ ಗೌರವ ಪ್ರಶಸ್ತಿಗೆ ಈ ವರ್ಷ (2019-20) ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಆಯ್ಕೆಯಾಗಿದ್ದಾರೆ.
ಪತ್ರಿಕಾರಂಗ ಕ್ಷೇತ್ರಕ್ಕೆ ಸಲ್ಲಿಸಿದ ಅಮೋಘ ಸಾಧನೆಯನ್ನು ಗುರುತಿಸಿ ಮನೋಹರ ಪ್ರಸಾದ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜ.19 ರಂದು ಸಂಜೆ 5:30ಕ್ಕೆ ಪಣಂಬೂರು ಬೀಚ್ನಲ್ಲಿ ನಡೆಯುವ ಕರಾವಳಿ ಉತ್ಸವ ಸಮಾರೋಪದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮೂಲತ: ಕಾರ್ಕಳ ತಾಲೂಕಿನ ಕರುವಾಲು ಗ್ರಾಮದಲ್ಲಿ ಜನಿಸಿದ್ದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣವನ್ನು ಪೂರ್ತಿಗೊಳಿಸಿ ಪತ್ರಿಕಾ ವೃತ್ತಿ ಜೀವನವನ್ನು ಆರಂಭಿಸಿದ್ದರು. ಕಳೆದ 36 ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸೃಜನಶೀಲ ಬರಹಗಾರರಾಗಿ, ಅನೇಕ ಕಥೆ, ಕವನಗಳನ್ನು ಬರೆದಿದ್ದು, ಬೊಗ್ಸಾಣೆ (ಕೊಂಕಣಿ), ಸೀತಾನದಿ (ಕನ್ನಡ), ದಬಕ್ ದಬಕ್ ಐಸಾ (ತುಳು), ಐಸ್ಕ್ರೀಂ (ತುಳು) ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಬಹುಮುಖ ಪ್ರತಿಭೆಯನ್ನು ಅನಾವರಣ ಗೊಳಿಸಿದ್ದಾರೆ.
ಕರ್ನಾಟಕ ಕರಾವಳಿಯ ಇತಿಹಾಸದ ಕುರಿತಾಗಿ 608 ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡಮಿ ಗೌರವ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ, ಕೆನರಾ ಬ್ಯಾಂಕ್ ಅಮೃತೋತ್ಸವ ಪುರಸ್ಕಾರವಲ್ಲದೆ ಆಸ್ಟ್ರೇಲಿಯಾ, ಬ್ರಿಟನ್, ಶ್ರೀಲಂಕಾ, ಮಲೇಶ್ಯಾ, ಕತಾರ್, ಕುವೈಟ್, ಅಬುಧಾಬಿ, ದುಬಾಯಿ ಮತ್ತಿತರ ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.