ಶೃಂಗೇರಿ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗಳಿಬ್ಬರಿಗೆ ಗಲ್ಲು ಶಿಕ್ಷೆ
ಜಿಲ್ಲೆಯ ಇತಿಹಾಸದಲ್ಲಿ ಗಲ್ಲು ಶಿಕ್ಷೆ ವಿಧಿಸಿದ ಎರಡನೇ ಪ್ರಕರಣ
ಚಿಕ್ಕಮಗಳೂರು, ಜ.18: ಕಳೆದ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ್ದ ಕಾಲೇಜು ಯುವತಿಯ ಅತ್ಯಾಚಾರ, ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಉಮೇಶ್ ಎಂ.ಅಡಿಗ ಅವರು ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿ ಆದೇಶಿಸಿದ್ದಾರೆ.
ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಸಮೀಪದ ಅಕ್ಸಾಲು ಕೂಡಿಗೆ ನಿವಾಸಿಗಳಾದ ಸಂತೋಷ್ ಹಾಗೂ ಪ್ರದೀಪ್ ಎಂಬ ಆರೋಪಿಗಳು ಗಲ್ಲು ಶಿಕ್ಷೆಗೊಳಗಾದ ಆರೋಪಿಗಳಾಗಿದ್ದು, ಈ ಆರೋಪಿಗಳು ಕಳೆದ 2016, ಫೆ.16ರಂದು ಶೃಂಗೇರಿ ಪಟ್ಟಣದಲ್ಲಿರುವ ಜೆಸಿಬಿಎಂ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದಿದ್ದಲ್ಲೇ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ 2020, ಜ.3ರಂದು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇಬ್ಬರು ಆರೋಪಿಗಳು ಕೃತ್ಯ ನಡೆಸಿರುವುದು ಸಾಭೀತಾಗಿದೆ ಎಂದು ತಿಳಿಸಿ, ಶಿಕ್ಷೆಯ ಪ್ರಮಾಣ ನಿಗದಿಗೆ ಜ.18ರಂದು ದಿನಾಂಕ ಗೊತ್ತು ಮಾಡಿತ್ತು. ಅದರಂತೆ ನ್ಯಾಯಾಲಯ ಶನಿವಾರ ಮಧ್ಯಾಹ್ನದ ವೇಳೆಯಲ್ಲಿ ಆರೋಪಿಗಳಿಬ್ಬರು ಕೃತ್ಯ ನಡೆಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರಿಗೆ ಐಪಿಸಿ ಸೆಕ್ಷನ್ 310 ಹಾಗೂ 370ಡಿ ಅಡಿಯಲ್ಲಿ ಗಲ್ಲು ಶಿಕ್ಷೆ ಹಾಗೂ 25 ವರ್ಷಗಳ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಸಂತ್ರಸ್ತೆಯ ಪರವಾಗಿ ಸರಕಾರಿ ಅಭಿಯೋಜಕ ಯಳಗೇರಿ ಅವರು ವಾದ ಮಂಡಿಸಿದ್ದರು.
ಏನಿದು ಘಟನೆ?
2016, ಫೆ.16ರಂದು ಶೃಂಗೇರಿ ತಾಲೂಕಿನ ಮೆಣಸೆ ಗ್ರಾಪಂ ವ್ಯಾಪ್ತಿಯ ಅಕ್ಸಾಲು ಕೂಡಿಗೆ ಗ್ರಾಮದ ತ್ಯಾಗರಾಜ ಭಟ್ಟ ಎಂಬವರ ಮಗಳು ಶೃಂಗೇರಿ ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆ ಬರೆಯಲು ತೆರಳಿದ್ದಳು. ಅಂದು ಪರೀಕ್ಷೆ ಬೇಗ ಮುಗಿದಿದ್ದರಿಂದ ಮಧ್ಯಾಹ್ನದ ವೇಳೆ ಕಾಲೇಜಿನಿಂದ ತನ್ನ ಮನೆಗೆ ನಡೆದುಕೊಂಡು ಬರುತ್ತಿದ್ದ ಸಂದರ್ಭ, ಅದೇ ಗ್ರಾಮದ ಸಂತೋಷ್ ಹಾಗೂ ಆತನ ಸ್ನೇಹಿತ ಪ್ರದೀಪ್ ಎಂಬವರು ಯುವತಿಯನ್ನು ಮನೆ ಸಮೀಪದ ಕಾಡಿನೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಬಳಿಕ ಯುವತಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಲ್ಲದೇ ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಯುವತಿಯ ಮೃತದೇಹವನ್ನು ಅಲ್ಲೇ ಸಮೀಪದ ಪಾಳು ಬಾವಿಯಲ್ಲಿ ಎಸೆದು ಗ್ರಾಮ ತೊರೆದು ಪರಾರಿಯಾಗಿದ್ದರೆಂದು ತಿಳಿದು ಬಂದಿದೆ.
ಮಧ್ನಾಹ್ನ ಕಳೆದರೂ ಮನೆಗೆ ಬಾರದ ಮಗಳ ಬಗ್ಗೆ ಚಿಂತೆಗೊಳಗಾದ ಯುವತಿ ತಂದೆ ಹಾಗೂ ಸಂಬಂಧಿ ಆಕೆಗಾಗಿ ಹುಡುಕಾಟ ಆರಂಭಿಸಿದಾಗ ಯುವತಿ ಬಗ್ಗೆ ಎಲ್ಲೂ ಸುಳಿವು ಸಿಕ್ಕಿರಲಿಲ್ಲ. ಕೂಡಲೇ ಅವರು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಯುವತಿಗಾಗಿ ಹುಡುಕಾಟ ಆರಂಭಿಸಿದಾಗ ಕಾಲು ದಾರಿ ಸಮೀಪದಲ್ಲಿದ್ದ ಬಾವಿಯಲ್ಲಿ ಪರಿಶೀಲಿಸಿದಾಗ ಯುವತಿಯ ಮೃತದೇಹ ಪತ್ತೆಯಾಗಿತ್ತು. ಮೃತದೇಹದಲ್ಲಿ ಅತ್ಯಾಚಾರ ಹಾಗೂ ಕೊಲೆಯ ಕುರುಹುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಯುವತಿ ತಂದೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ತನಿಖೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಠಾಣಾಧಿಕಾರಿ ಸುಧೀರ್ ಹೆಗ್ಡೆ ಪ್ರಕರಣದ ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಆರೋಪಿಗಳಿಬ್ಬರು ಕಾಲು ದಾರಿ ಸಮೀಪದ ಬಾವಿ ಬಳಿ ಇದ್ದುದನ್ನು ಕಂಡವರು ಹೇಳಿಕೆ ನೀಡಿದ್ದರಿಂದ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಸುಧೀರ್ ಹೆಗ್ಡೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ಈ ಸಂಬಂಧ ಕಳೆದ ನಾಲ್ಕು ವರ್ಷಗಳಿಂದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಸುಮಾರು 15 ಮಂದಿ ಸಾಕ್ಷಿಗಳ ಹೇಳಿಕೆ ಪಡೆದು 2020, ಜ.3ರಂದು ಆರೋಪಿಗಳು ಕೃತ್ಯ ನಡೆಸಿರುವುದನ್ನು ಸಾಬೀತಾಗಿದೆ ಎಂದು ತಿಳಿಸಿ, ಶಿಕ್ಷೆ ಪ್ರಮಾಣ ನಿಗದಿಗೆ ಜ.28ಕ್ಕೆ ದಿನಾಂಕ ನಿಗದಿ ಮಾಡಿತ್ತು. ಅದರಂತೆ ಶನಿವಾರ ಆರೋಪಿಗಳಿಬ್ಬರಿಗೆ ಗಲ್ಲುಶಿಕ್ಷೆ ವಿಧಿಸಿದ ನ್ಯಾಯಾಲಯ ತೀರ್ಪು ನೀಡಿದೆ.
ನಿರ್ಭಯಾ ಪ್ರಕರಣ ಉಲ್ಲೇಖ
ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ದಿಲ್ಲಿಯ ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿರುವ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ ಹೆಚ್ಚು ಮಹತ್ವ ಪಡೆದಂತಾಗಿದ್ದು, ಈ ಪ್ರಕರಣದ ವಿಚಾರಣೆ, ವಾದ ಮಂಡನೆ ವೇಳೆ ಸರಕಾರಿ ಅಭಿಯೋಜಕರು ನಿರ್ಭಯಾ ಪ್ರಕರಣ ಸೇರಿದಂತೆ ದೇಶದ ವಿವಿಧೆಡೆ ನಡೆದ ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಗಲ್ಲುಶಿಕ್ಷೆಯಾದ ಪ್ರಕರಣಗಳನ್ನು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆಂದು ತಿಳಿದು ಬಂದಿದೆ. ಇಂತಹ ಪ್ರಕರಣಗಳ ಆಧಾರದ ಮೇಲೆ ಭವಿಷ್ಯದಲ್ಲಿ ಇಂತಹ ಅಮಾನವೀಯ ಕೃತ್ಯಕ್ಕಿಳಿಯುವವರಿಗೆ ಗಲ್ಲು ಶಿಕ್ಷೆ ಖಾಯಂ ಎಂಬ ಸಂದೇಶ ನೀಡುವ ತೀರ್ಪು ಇದಾಗಿದೆ ಎಂಬ ಅಭಿಪ್ರಾಯ ಸರಕಾರಿ ಅಭಿಯೋಜಕರಿಂದ ವ್ಯಕ್ತವಾಗಿದ್ದು, ನ್ಯಾಯಾಲಯ ಇಂತಹ ತೀರ್ಪು ನೀಡಿರುವುದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಂಡ ಮನೆಗೆ ದ್ರೋಹ ಬಗೆದ
ಅತ್ಯಾಚಾರ ಎಸಗಿ ಯುವತಿಯನ್ನು ಕೊಲೆ ಮಾಡಿದ ಆರೋಪಿಗಳ ಪೈಕಿ ಸಂತೋಷ್ ಎಂಬಾತ ಯುವತಿಯ ಗ್ರಾಮದವನೇ ಆಗಿದ್ದ, ಈತ ಯುವತಿಯ ತಂದೆ ತ್ಯಾಗರಾಜ್ ಭಟ್ ಅವರ ಮನೆಗೆ ಆಗಾಗ್ಗೆ ಕೆಲಸಕ್ಕೂ ಬರುತ್ತಿದ್ದ, ಯುವತಿ ಮನೆಯಲ್ಲೇ ಊಟ, ತಿಂಡಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. 'ಈತ ಮುಂದೊಂದು ದಿನ ಇಂತಹ ಕೃತ್ಯ ಎಸಗುತ್ತಾನೆಂದು ಕನಸಿನಲ್ಲೂ ಎಣಸಿರಲಿಲ್ಲ ಎಂದು ಯುವತಿಯ ತಂದೆ ಶನಿವಾರ ನ್ಯಾಯಾಲಯದ ಆವರಣದಲ್ಲಿ ವಾರ್ತಾಭಾರತಿಗೆ ಭಾವುಕರಾಗಿ ಹೇಳಿದರು.
ಮಗಳನ್ನು ಕಳೆದುಕೊಂಡು ಕಳೆದ ನಾಲ್ಕು ವರ್ಷಗಳಿಂದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಪ್ರತಿದಿನ ಪ್ರಾರ್ಥಿಸುತ್ತಿದ್ದೆ. ಏನೂ ಅರಿಯದ ಅಮಾಯಕಿಯಂತಿದ್ದ ಮಗಳನ್ನು ಹೊಸಕಿ ಹಾಕಿದ ಆರೋಪಿಗಳಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿರುವುದರಿಂದ ನನಗೆ ಹಾಗೂ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ. ತನಿಖಾಧಿಕಾರಿ ಸುಧೀರ್ ಹೆಗ್ಡೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ಮಗಳ ಸಾವಿಗೆ ನ್ಯಾಯ ಸಿಕ್ಕಿದೆ. ಇಂತಹ ತೀರ್ಪು ನೀಡುವ ಮೂಲಕ ನ್ಯಾಯಾಲಯ ಅತ್ಯಾಚಾರಿಗಳಿಗೆಲ್ಲ ತಕ್ಕ ಪಾಠವಾಗಲಿದೆ ಎಂಬ ಸಂದೇಶ ನೀಡಿದೆ. ಪ್ರಕರಣದಲ್ಲಿ 15ಮಂದಿ ಸಾಕ್ಷಿ ಹೇಳಿದ್ದು, ಅವರಿಗೆಲ್ಲರಿಗೂ ಋಣಿಯಾಗಿದ್ದೇನೆ.
- ತ್ಯಾಗರಾಜ ಭಟ್, ಕೊಲೆಗೀಡಾದ ಯುವತಿ ತಂದೆ
ನ್ಯಾಯಾಲಯ ಶನಿವಾರ ಮಧ್ಯಾಹ್ನ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಘೋಷಿಸುತ್ತಿದ್ದಂತೆ ನ್ಯಾಯಾಲಯದ ಆವರಣಕ್ಕೆ ಆಗಮಿಸಿದ್ದ ಆರೋಪಿಗಳ ಸಂಬಂಧಿಕರು ಸುದ್ದಿ ತಿಳಿದು ದುಃಖದ ಮಡುವಿನಲ್ಲಿದ್ದುದು ಕಂಡು ಬಂತು. ಆರೋಪಿಗಳನ್ನು ಪೊಲೀಸರು ನ್ಯಾಯಾಲಯದಿಂದ ಹೊರಗೆ ಕರೆ ತರುವ ವೇಳೆ ಆರೋಪಿಗಳ ಪೈಕಿ ಓರ್ವನ ತಾಯಿಯೊಬ್ಬರು ಕಣ್ಣೀರಿಡುತ್ತಾ ಅವರತ್ತ ಓಡುತ್ತಿದ್ದ ದೃಶ್ಯ ಕಂಡು ಬಂತು. ಆದರೆ ಪೊಲೀಸರು ಆರೋಪಿಗಳನ್ನು ವಾಹನದಲ್ಲಿ ಕೂರಿಸಿ ಕರೆದೊಯ್ದರು. ಈ ವೇಳೆ ವೃದ್ಧೆ, ಮಗುವಿನೊಂದಿಗಿದ್ದ ಓರ್ವ ಮಹಿಳೆ ಹಾಗೂ ಮತ್ತೋರ್ವ ಮಹಿಳೆ ನ್ಯಾಯಾಲಯದ ಆವರಣದ ಎದುರು ದುಃಖ ತಡೆದುಕೊಳ್ಳಲಾಗದೇ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ್ದರು.
ಗುಲ್ಲು ಶಿಕ್ಷೆ ವಿಧಿಸಿದ ಎರಡನೇ ಪ್ರಕರಣ:
ಶೃಂಗೇರಿ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಶನಿವಾರ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದ್ದು, ಈ ಮೂಲಕ ಈ ಪ್ರಕರಣ ಜಿಲ್ಲೆಯ ಇತಿಹಾಸದಲ್ಲಿ ಗಲ್ಲು ಶಿಕ್ಷೆಗೊಳಗಾದ ಎರಡನೇ ಪ್ರಕರಣವಾಗಿ ದಾಖಲಾಗಿದೆ. ಕಳೆದ ಒಂದೂವರೆ ದಶಕದ ಹಿಂದೆ ಕಡೂರಿನಲ್ಲಿ ಸರಕಾರಿ ಉದ್ಯೋಗದಲ್ಲಿದ್ದ ಮಹಿಳೆಯೊಬ್ಬರ ಮೇಲೆ ಬಾಡಿಗೆ ವಾಹನ ಚಾಲಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ನಂತರ ಆಕೆಯ ಮೈಮೇಲಿದ್ದ ಚಿನ್ನಾಭರಣ ತೆಗೆದು ಶವವನ್ನು ಚಾರ್ಮಾಡಿ ಘಾಟ್ನಲ್ಲಿ ಎಸೆದಿದ್ದ. ಪ್ರಕರಣದ ಆರೋಪಿಗೆ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಅಂದಿನ ನ್ಯಾಯಾಧೀಶ ನಟರಾಜ್ ಎಂಬವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ತೀರ್ಪು ನೀಡಿದ್ದರು. ಈ ತೀರ್ಪಿನ ವಿರುದ್ಧ ಆರೋಪಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲೂ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಲಾಗಿತ್ತೆಂಬುದನ್ನು ನಗರದ ಹಿರಿಯ ವಕೀಲರೊಬ್ಬರು ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.