ಬಿಜೆಪಿಯಿಂದ ಧರ್ಮದ ಆಧಾರದಲ್ಲಿ ಪ್ರಚೋದನೆ: ರಮಾನಾಥ ರೈ
ಮಂಗಳೂರು, ಜ.18: ಕನಕಪುರದಲ್ಲಿ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಬಿಜೆಪಿ ಧರ್ಮದ ಆಧಾರದಲ್ಲಿ ಪ್ರಚೋದನೆ ಆಗಿ ಆ ಸಮುದಾಯದ ಬೀದಿಗಿಳಿದಾಗ ರಾಜಕೀಯ ಲಾಭ ಪಡೆಯುವ ಹುನ್ನಾರವನ್ನು ಬಿಜೆಪಿ ಸೃಷ್ಟಿಸುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದ.ಕ. ಜಿಲ್ಲೆಯನ್ನು ಮತೀಯ ಪ್ರಯೋಗಾಲಯ ಮಾಡಲು ಪ್ರಯತ್ನಿಸಿದ ಸಂಘಟನೆಯ ನಾಯಕರು ಬೆಂಗಳೂರಿನಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿ, ಶಾಂತಿ ಹಾಗೂ ಸಹಬಾಳ್ವೆಯನ್ನು ಬಯಸುವ ಸಮುದಾಯವನ್ನು ಪ್ರಚೋದಿಸುವ ಕೆಲಸ ಮಾಡಿದ್ದಾರೆ ಎಂದರು.
ಇಲ್ಲಿನ ಕ್ರೈಸ್ತ ಸಮುದಾಯ ಈ ಹಿಂದೆ ಚರ್ಚ್ ದಾಳಿ ಸಂದರ್ಭದಲ್ಲೂ ಪ್ರಚೋದನೆಗೆ ಒಳಗಾಗದೆ ಸಾಮರಸ್ಯವನ್ನು ಉಳಿಸಿಕೊಂಡಿತ್ತು. ಅಂತಹ ಸಮುದಾಯವನ್ನು ಪ್ರಚೋದನೆಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಬಹುತ್ವದ, ಜಾತ್ಯತೀಯತೆಯ ಶ್ರೀಮಂತ ಇತಿಹಾಸವುಳ್ಳ ಭಾರತದ ಬಗ್ಗೆ ಜಗತ್ತೇ ಕೊಂಡಾಡುತ್ತದೆ. ಆದರೆ ಬಿಜೆಪಿ ಮಾತ್ರ ಧರ್ಮದ ಆಧಾರದಲ್ಲಿ ಆ ಗೌರವಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಕಲ್ಲಡ್ಕದ ಶ್ರೀರಾಮ ವಿದ್ಯಾ ಸಂಸ್ಥೆಗೆ ಒಂದು ಕೆಜಿ ಅಕ್ಕಿಯೂ ಹೋಗಿಲ್ಲ. ಚೆಕ್ ರೂಪದಲ್ಲಿ ದುಡ್ಡು ಹೋಗಿದೆ. ಅದನ್ನು ಅನ್ನ ದಾಸೋಹಕ್ಕೆ ಬಳಸದೆ ದುರುಪಯೋಗಪಡಿಸಲಾಗಿದೆ. ಪ್ರತಿ ತಿಂಗಳು 4 ಲಕ್ಷ ರೂ. ಚೆಕ್ ಶಾಲೆಗೆ ಪಾವತಿಯಾಗತ್ತಿತ್ತು ಎಂದು ರೈ ಆರೋಪಿಸಿದರು.
ಸಿಎಎ, ಎನ್ಆರ್ಸಿ, ಎನ್ಪಿಆರ್ ಉಲ್ಲೇಖಿಸಿ ಮಾತನಾಡಿದ ಅವರು, ಕಾನೂನಿನಿಂದ ಜನರಿಗೆ ತೊಂದರೆ ಆಗುವುದು ಬೇರೆ ಮಾತು. ಆದರೆ ಧರ್ಮದ ಆದಾರದಲ್ಲಿ ಕಾನೂನು ಅನುಷ್ಠಾನಗೊಳಿಸುವುದನ್ನು ಯಾರೂ ಒಪ್ಪುವಂತಿಲ್ಲ ಎಂದು ಅವರು ಹೇಳಿದರು.
ಶಾರದಾ ಚಿಟ್ಫಂಡ್ನ ಆರೋಪಿ ಬಿಜೆಪಿ ಸೇರಿದಾಕ್ಷಣ ಆರೋಪದಿಂದ ಖುಲಾಸೆಯಾಗುತ್ತಾರೆ ಎಂದಾದರೆ ಈ ದೇಶ ಎತ್ತ ಸಾಗುತ್ತಿದೆ ಎಂದು ಗ್ರಹಿಸಬಹುದು. ಆರ್ಥಿಕ ಹಿಂಜರಿತ, ಹಣದುಬ್ಬರದ ಬಗ್ಗೆ ಚರ್ಚೆ ಆಗಬೇಕಾಗಿದೆ. ಆದರೆ ಅದು ಆಗುತ್ತಿಲ್ಲ. ಸುಳ್ಳು ಹೇಳುವುದು ಮತೀಯವಾದಿ ಸಂಘಟನೆಗಳ ಬಂಡವಾಳವಾಗಿದೆ ಅಷ್ಟೆ. ಬಿಜೆಪಿಯ ಆಹಾರವೇ ಅಲ್ಪಸಂಖ್ಯಾತರು. ಅಲ್ಪಸಂಖ್ಯಾತರಿಲ್ಲವಾದರೆ ಪಕ್ಷವೇ ಇಲ್ಲ. ಅವರದ್ದೇನಿದ್ದರೂ ದೇವರು, ಧರ್ಮ, ದೇಶಪ್ರೇಮದ ಸೋಗು. ಹಿಂದು- ಮುಸ್ಲಿಂ, ಭಾರತ- ಪಾಕಿಸ್ತಾನ ಅಷ್ಟೇ ವಿಷಯ ಎಂದು ರಮಾನಾಥ ರೈ ಮೂದಲಿಸಿದರು.
ಎಸ್ಡಿಪಿಐ ಬ್ಯಾನ್ ಬಿಜೆಪಿಯ ಲಾಭ- ನಷ್ಟದ ಲೆಕ್ಕಾಚಾರದಲ್ಲಿ
ಎಸ್ಡಿಪಿಐ ಬ್ಯಾನ್ ಮಾಡುವ ರಾಜ್ಯ ಸರಕಾರದ ಹೇಳಿಕೆಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮಾನಾಥ ರೈ, ಯಾವುದೇ ರೀತಿಯ ಮತೀಯ ವಾದವನ್ನು ನಾವು ಒಪ್ಪುವುದಿಲ್ಲ. ಬಿಜೆಪಿಗೆ ಲಾಭ ನಷ್ಟದ ಲೆಕ್ಕಾಚಾರದ ಮೇಲೆ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬಹುದು. ಕಾಂಗ್ರೆಸ್ ಪಕ್ಷದ ಮುಖಂಡರು ಈ ಬಗ್ಗೆ ಮಾತನಾಡಿದ್ದಾರೆ. ಅವರ ಮಾತಿಗೆ ಸಹಮತವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಇಬ್ರಾಹೀಂ ಕೋಡಿಜಾಲ್, ಮೋನಪ್ಪ ಶೆಟ್ಟಿ, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಅಪ್ಪಿ, ದೀಪಕ್ ಪೂಜಾರಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.