ಜಾಗತಿಕ ಶಾಂತಿ ಪಾಲನೆಯಲ್ಲಿ ಭಾರತೀಯರಿಂದ ಮಹತ್ವದ ಕೊಡುಗೆ: ಡಾ.ಅಲೆಕ್ಸಾಂಡ್ರು ಬಲ್ಲಾಸ್
ಮಂಗಳೂರು, ಜ.18: ಜಾಗತಿಕ ಶಾಂತಿ ಪಾಲನೆಯಲ್ಲಿ ಭಾರತ ಮಹತ್ವದ ಕೊಡುಗೆ ನೀಡಿದೆ ಎಂದು ಅಮೆರಿಕದ ಸ್ಟೇಟ್ ಯುನಿವರ್ಸಿಟಿ ಆಫ್ ನ್ಯೂಯಾರ್ಕ್ ನ ಅಂತಾರಾಷ್ಟ್ರೀಯ ಅಧ್ಯಯನದ ಸಹಾಯಕ ಪ್ರಾಧ್ಯಾಪಕ ಡಾ.ಅಲೆಕ್ಸಾಂಡ್ರು ಬಲ್ಲಾಸ್ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ, ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನ ಯುವ ರೆಡ್ಕ್ರಾಸ್ ಘಟಕ, ಇತಿಹಾಸ ಮತ್ತು ಪುರಾತತ್ತ್ವ ಸ್ನಾತಕೋತ್ತರ ವಿಭಾಗಗಳ ಸಹಯೋಗದೊಂದಿಗೆ ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಶನಿವಾರ ’ಶಾಂತಿ ಪಾಲನಾ ಕ್ರಮಗಳಿಗೆ ಭಾರತದ ಕೊಡುಗೆ’ ಎಂಬ ವಿಶೇಷದಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು.
ಎರಡನೆ ಮಹಾಯುದ್ಧದ ಬಳಿಕ ವಿಶ್ವಸಂಸ್ಥೆಯ ನೇತೃತ್ವದಲ್ಲಿ ರಚನೆಯಾದ ಜಾಗತಿಕ ಶಾಂತಿ ಪಾಲನಾ ಪಡೆ ಜಗತ್ತಿನ ವಿವಿಧ ರಾಷ್ಟ್ರಗಳ ನಡುವಿನ ಸಂಭಾವ್ಯ ಯುದ್ಧಗಳನ್ನು ತಡೆಯವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ. ಅದೇರೀತಿ ವಿವಿಧ ದೇಶಗಳ ಒಳಗಿನ ಆಂತರಿಕ ಗಲಭೆಗಳನ್ನು ನಿಯಂತ್ರಿಸಲು ವಿವಿಧ ರಾಷ್ಟಗಳ ಜೊತೆ ಸಮನ್ವಯ ಸಾಧಿಸುತ್ತಾ ಬಂದಿದೆ. ಜಾಗತಿಕವಾದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತದ ಯೋಧರು ಶಾಂತಿಪಾಲನಾ ಪಡೆಯಲ್ಲಿದ್ದು, ವಿವಿಧ ಕಾರ್ಯಾಚರಣೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಲೋಕೇಶ್ ಮಾತನಾಡುತ್ತಾ, ಭಾರತಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಲ್ಲಿ ಸದಸ್ಯ ಸ್ಥಾನ ದೊರೆಯಲು ವಿಶ್ವದ ಪ್ರಮುಖ ರಾಷ್ಟ್ರಗಳು ಸಮ್ಮತಿ ಸೂಚಿಸಿರುವುದು ಉತ್ತಮ ಬೆಳವಣಿಗೆ. ಜಾಗತಿಕ ಶಾಂತಿ ಪಾಲನಾ ಪಡೆ ರಚನೆಯ ಬಳಿಕ ಜಾಗತಿಕ ಮಟ್ಟದಲ್ಲಿ ಯುದ್ಧ ನಡೆಯುವುದನ್ನು ತಡೆಯಲು ಸಾಧ್ಯವಾಗಿದೆ. ಹಲವು ಸಂಘರ್ಷಗಳನ್ನು ಬಗೆಹರಿಸಲು ಸಾಧ್ಯವಾಗಿದೆ ಎಂದು ಲೋಕೇಶ್ ತಿಳಿಸಿದ್ದಾರೆ.
ಮಂಗಳೂರು ವಿ.ವಿ.ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್, ಸೈಂಟ್ ಅಲೋಶಿಯಸ್ ಕಾಲೇಜಿನ ಡಾ ವಿಶಾಜ್ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.