ಕಂಬಳ ಕೂಟದ ಬಗ್ಗೆ ವಿವಿಯಲ್ಲಿ ಅಧ್ಯಯನ ಪೀಠ ಅಗತ್ಯ-ನವೀನ್ ಭಂಡಾರಿ
ಕೋಟಿ ಚೆನ್ನಯ ಹೊನಲು ಬೆಳಕಿನ ಕಂಬಳ ಕೂಟ ಉದ್ಘಾಟನೆ
ಪುತ್ತೂರು : ಕೃಷಿ ಪರಂಪರೆಯ ಸಂಕೇತವಾಗಿರುವ ಕಂಬಳ ಸರಕಾರದ, ದಾನಿಗಳ ನೆರವಿನಿಂದ ಇಂದು ನಡೆಯುತ್ತಿದ್ದು, ತುಳುನಾಡಿನ ಜಾನಪದ ಹಾಗೂ ಪುರಾತನ ಕ್ರೀಡೆಯಾದ ಕಂಬಳದ ಕುರಿತಂತೆ ಮಂಗಳೂರು ವಿಶ್ವ ವಿದ್ಯಾನಿಲಯಲ್ಲಿ ಅಧ್ಯಯನ ಪೀಠವನ್ನು ಆರಂಭಿಸುವ ಅಗತ್ಯವಿದೆ. ಈ ಕುರಿತು ಗಂಭೀರ ಅಧ್ಯಯನ ನಡೆಸುವ ಮೂಲಕ ಕಂಬಳಕ್ಕೂ ವಿಶೇಷ ಸ್ಥಾನಮಾನ ದೊರಕುವಂತಾಗಬೇಕು ಎಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು.
ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದ ದೇವರು ಮಾರು ಗದ್ದೆಯಲ್ಲಿ ಶನಿವಾರ ಬೆಳಗ್ಗೆ ಆರಂಭವಾದ 27ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಸುಧಾನ ದೇವಾಲಯದ ಧರ್ಮಗುರು ರೆ.ಫಾ. ವಿಜಯ ಹಾರ್ವಿನ್ ಮಾತಯನಾಡಿ ಕಂಬಳದಿಂದ ಯಾವುದೇ ಪ್ರಾಣಿ ಹಿಂಸೆ ಕೆಲಸ ನಡೆಯುವುದಿಲ್ಲ. ಕಂಬಳದ ಕೋಣಗಳ ಯಜಮಾನರು ಕೋಣಗಳನ್ನು ತಮ್ಮ ಮಕ್ಕಳಂತೆ ಸಾಕಿ ಸಲಹುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಮಾತನಾಡಿ ಕಂಬಳದ ಕುರಿತು ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕಗಳಲ್ಲಿ ಪಾಠವಾಗಿ ಸೇರ್ಪಡೆಗೊಳಿಸಬೇಕು. ಕಂಬಳ ಕ್ರೀಡೆಗೆ ಯಾವುದೇ ಅಡ್ಡಿ ಮಾಡುವುದು ಸರಿಯಲ್ಲ. ಕೃಷಿಕರ ಕ್ರೀಡೆಯಾದ ಕಂಬಳವನ್ನು ಸಮಾಜ ಇನ್ನಷ್ಟು ಪ್ರೋತ್ಸಾಹಿಸಬೇಕು ಎಂದರು.
ವೇದಿಕೆಯಲ್ಲಿ ಜೈನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ರವೀಂದ್ರ ಶೆಟ್ಟಿ ನುಳಿಯಾಲು, ಎಲ್.ಟಿ. ಅಬ್ದುಲ್ ರಝಾಕ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಲೋಕೇಶ್ ಸಿ., ತಿಮ್ಮಪ್ಪ ಗೌಡ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಧರ್ಮಪಾಲ ಗೌಡ ಕರಂದ್ಲಾಜೆ, ಸಂಜೀವ ಪೂಜಾರಿ ಕೂರೇಲು, ಕೆ. ಕರುಣಾಕರ ಸುವರ್ಣ, ಕೇಶವ ಬೆದ್ರಾಳ, ಅಜಿತ್ ಕುಮಾರ್ ಜೈನ್ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಸಂಚಾಲಕ ಎನ್. ಸುಧಾಕರ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಜೆ.ಕೆ. ವಸಂತ ಕುಮಾರ್ ರೈ ವಂದಿಸಿದರು. ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.