ಹೂಹಾಕುವಕಲ್ಲು: ಜಿಲ್ಲಾ ಮಟ್ಟದ ಮಕ್ಕಳ ಮೇಳ ಉದ್ಘಾಟನೆ
ಕೊಣಾಜೆ : ಭಾವೈಕ್ಯತೆ, ವಿನಯತೆ, ಐಕ್ಯತೆ, ಪ್ರಾಮಾಣಿಕತೆ ಮೊದಲಾದ ಗುಣ ನಮ್ಮಲ್ಲಿದ್ದರೆ ಸೌಹಾರ್ದಯುತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಇಂತಹ ರಾಷ್ಟ್ರೀಯ ಭಾವೈಕ್ಯ ತಾ ಶಿಬಿರದಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ಡಿ.ಎಸ್.ಗಟ್ಟಿ ಅವರು ಹೇಳಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ದಕ್ಷಿಣ ಕನ್ನಡ ಇದರ ನಿರ್ದೇಶನದಲ್ಲಿ ಭಾರತ ಸೇವಾದಳ ತಾಲೂಕು ಸಮಿತಿ ಬಂಟ್ವಾಳ ಹಾಗೂ ದ.ಕ.ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಹೂ ಹಾಕುವಕಲ್ಲು ಇವರ ಆಶ್ರಯದಲ್ಲಿ ಹೂ ಹಾಕುವಕಲ್ಲು ಶಾಲೆಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ 2019-2020 ವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ಹಿರಿಯರು ಸೇರಿದಂತೆ ಎಲ್ಲರನ್ನೂ ಗೌರವಿಸುವ, ಪ್ರೀತಿಸುವ ಮನೋಭಾವನೆ ನಮ್ಮಲ್ಲಿದ್ದರೆ ಉತ್ತಮತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಇದರೊಂದಿಗೆ ರಾಷ್ಟ್ರ ಪ್ರೇಮವನ್ನೂ ನಾವು ಬೆಳೆಸಿ ಸದೃಢ ದೇಶ ನಿರ್ಮಾಣಕ್ಕೆ ನಾವೆಲ್ಲರೂ ಕೊಡುಗೆ ಕೊಡುವಂತಾಗಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಂಟ್ವಾಳ ತಾಲೂಕು ಪಂಚಾಯತಿ ಅಧ್ಯಕ್ಷ ರಾದ ಚಂದ್ರಹಾಸ್ ಕರ್ಕೆರ ಮಾತನಾಡಿ, ಸೇವಾದಳದಿಂದ ನಾವು ದೇಶ ಪ್ರೇಮವನ್ನು ಬೆಳೆಸಿಕೊಂಡು ಮುನ್ನಡೆಯಲು ಸಹಕಾರಿಯಾಗುತ್ತದೆ. ರಾಷ್ಟ್ರೀಯತೆ, ಪ್ರಾಮಾಣಿಕತೆ ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳುವುದಕ್ಕೆ ಭಾವೈಕ್ಯತಾ ಮೇಳವು ಸಹಕಾರಿಯಾಗಬಲ್ಲುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ. ಭಾರತ ಸೇವಾದಳದ ಜಿಲ್ಲಾಧ್ಯಕ್ಷರಾದ ಬಶೀರ್ ಬೈಕಂಪಾಡಿ,ದ.ಕ.ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಪಿ.ಕೆ.ಸುಧೀರ್, ಬಂಟ್ವಾಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಉಮಾನಾಥ ರೈ ಮೆರಾವು, ಬಂಟ್ವಾಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಹೈದರ್ ಕೈರಂಗಳ, ಉದ್ಯಮಿ ರಮೇಶ್ ಶೇಣವ ಚಕ್ರಕೋಡಿ, ಕ್ಷೇತ್ರ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರತ್ನಾವತಿ, ಎಸ್ ಡಿಎಂಸಿ ಅಧ್ಯಕ್ಷರಾದ ನವೀನ್ ಚಂದ್ರ ಕೆ, ದ.ಕ.ಜಿಲ್ಲಾ ಸಂಘಟಕ ಮಂಜೇಗೌಡ, ಸಮೂಹ ಸಂಪನ್ಮೂಲ ವ್ಯಕ್ತಿ ಆಶಾ, ಶಾಲಾ ಮುಖ್ಯೋಪಾಧ್ಯಾಯಿನಿ ಜೋಯ್ಸ್ ಮೇರಿ ಕುವೆಲ್ಲೋ ಹಾಗೂ ಪಂಚಾಯತ್ ಸದಸ್ಯರು, ಎಸ್ ಡಿಎಂಸಿ ಸದಸ್ಯರು ಭಾಗವಹಿಸಿದ್ದರು.
ಬಂಟ್ವಾಳ ತಾಲೂಕು ಭಾರತ ಸೇವಾದಳದ ಅಧ್ಯಕ್ಷರಾದ ಶೇಷಪ್ಪ ಮೂಲ್ಯ ಸ್ವಾಗತಿಸಿ, ದೈಹಿಕ ಶಿಕ್ಷಕ ಪ್ರಭಾಕರ ಜೋಗಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಭಾವೈಕ್ಯತಾ ಮೆರವಣಿಗೆಯು ಹೂಹಾಕುವಕಲ್ಲು ಶಾಲೆಯಿಂದ ಪುಣ್ಯಕೋಟಿನಗರದವರೆಗೆ ನಡೆಯಿತು.
ಶಿಬಿರದಲ್ಲಿ ದ.ಕ.ಜಿಲ್ಲೆಯ ವಿವಿಧ ಶಾಲೆಗಳ ಸುಮಾರು ಎಂಟುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು.