ಕೇರಳ-ಕರ್ನಾಟಕ ಗಡಿಭಾಗದ ವಿದ್ಯಾರ್ಥಿಗಳು, ಮಹಿಳೆಯರು ಸೇರಿ 650ಕ್ಕೂ ಅಧಿಕ ಮಂದಿಗೆ ನೋಟಿಸ್ !
ಮಂಗಳೂರು ಹಿಂಸಾಚಾರ ಪ್ರಕರಣ
ಫೈಲ್ ಚಿತ್ರ
► ಮೊಬೈಲ್ ಟವರ್ ಆಧಾರದಲ್ಲಿ ನೋಟಿಸ್ ಜಾರಿ ?
► ನಿಗದಿತ ದಿನಾಂಕದೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ
ಮಂಗಳೂರು, ಜ.18: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಡಿ.19ರಂದು ನಗರದ ಸ್ಟೇಟ್ಬ್ಯಾಂಕ್-ಬಂದರ್-ಹಂಪಕಟ್ಟೆ ಪರಿಸರದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ಕರ್ನಾಟಕ ಗಡಿಭಾಗದ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು, ಮಹಿಳೆಯರ ಸಹಿತ ಹಲವರಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಡಿ.19ರಂದು ಸೆ.144 ಜಾರಿಗೊಳಿಸಲಾಗಿತ್ತು. ಆದರೂ ಕೆಲವು ಪ್ರತಿಭಟನಾಕಾರರು ಸ್ಟೇಟ್ಬ್ಯಾಂಕ್ ಪರಿಸರದಲ್ಲಿ ಜಮಾಯಿಸಿದ್ದರು. ಅವರನ್ನು ಚದುರಿಸುವ ಭರಾಟೆಯಲ್ಲಿ ನಡೆಸಿದ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟಿದ್ದರು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು.
ಆ ಬಳಿಕದ ತನಿಖೆಯ ಭಾಗವಾಗಿ ಸೆ.144 ಉಲ್ಲಂಘಿಸಿ ಪಾಲ್ಗೊಂಡ ಪ್ರತಿಭಟನಾಕಾರರ ಪತ್ತೆ ಹಚ್ಚುವ ಸಲುವಾಗಿ ಪೊಲೀಸರು ಮೊಬೈಲ್ ಟವರ್ ಆಧಾರದ ಮೇಲೆ ಕೇರಳ-ಕರ್ನಾಟಕ ಗಡಿಭಾಗದಲ್ಲಿ ನೆಲೆಸಿರುವವರ ಪೈಕಿ ಡಿ.19ರಂದು ಬೇರೆ ಬೇರೆ ಕಾರಣಕ್ಕೆ ಮಂಗಳೂರಿಗೆ ಬಂದಿರುವ 650ಕ್ಕೂ ಅಧಿಕ ಮಂದಿಗೆ ಸ್ಪೀಡ್ಪೋಸ್ಟ್ ಮೂಲಕ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
‘ಡಿ.19ರಂದು ಕಾನೂನು ಬಾಹಿರವಾಗಿ ತಾವು ಮಂಗಳೂರಿನಲ್ಲಿ ಜಮಾವಣೆಗೊಂಡಿದ್ದು, ಗಲಭೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಹಾಗಾಗಿ ನಿಗದಿತ ದಿನಾಂಕದೊಳಗೆ ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಬೇಕು’ ಎಂದು ಪೊಲೀಸರು ಜಾರಿಗೊಳಿಸಿದ ನೊಟೀಸ್ನಲ್ಲಿ ತಿಳಿಸಲಾಗಿದೆ.
ಅಸಮಾಧಾನ: ಕರ್ನಾಟಕ-ಕೇರಳ ಗಡಿಭಾಗದಲ್ಲಿ ನೆಲೆಸಿರುವ ಸಾವಿರಾರು ಮಂದಿ ದಿನನಿತ್ಯ ಶಿಕ್ಷಣ, ವ್ಯಾಪಾರ, ಉದ್ಯೋಗ ಮತ್ತಿತ್ಯಾದಿ ಕಾರಣಕ್ಕೆ ಮಂಗಳೂರಿಗೆ ಬಂದು ಹೋಗುತ್ತಾರೆ. ಆ ಪೈಕಿ ಈಗಾಗಲೆ 650ಕ್ಕೂ ಅಧಿಕ ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಇದು 1 ಸಾವಿರದ ಗಡಿದಾಟುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗೆ ನೋಟಿಸ್ ಪಡೆದವರ ಪೈಕಿ ಶೇ.99ರಷ್ಟು ಮಂದಿ ಮುಸ್ಲಿಮರು ಎಂಬುದು ಗಮನಾರ್ಹವಾಗಿದೆ. ಕೇವಲ ಗಡಿಭಾಗದಲ್ಲಿ ನೆಲೆಸಿದವರು ಎಂಬ ಏಕೈಕ ಕಾರಣಕ್ಕೆ ಪೊಲೀಸರು ನೋಟಿಸ್ ಜಾರಿಗೊಳಿಸಿರುವ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಹಲವರು ವಿಚಾರಣೆಗೆ ಹಾಜರು: ಈ ಮಧ್ಯೆ ಪೊಲೀಸರು ಹೊರಡಿಸಿದ್ದ ನೋಟಿಸ್ನ್ನು ಸ್ವೀಕರಿಸಿದ ಹಲವರು ಶನಿವಾರ ಬಂದರ್ ಠಾಣೆಗೆ ಹಾಜರಾಗಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರೂ ಸೇರಿದ್ದಾರೆ. ಹೀಗೆ ನೋಟಿಸ್ನೊಂದಿಗೆ ಠಾಣೆಗೆ ಹಾಜರಾದವರ ಹೆಸರು, ಮೊಬೈಲ್ ಸಂಖ್ಯೆ, ಸಹಿಯನ್ನು ಪಡೆದಿರುವ ಪೊಲೀಸರು ಸಿಐಡಿಯಿಂದ ನೋಟಿಸ್ ಬಂದರೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಡಿ.19ರಂದು ಯಾರ್ಯಾರು ಯಾವ್ಯಾವ ಉದ್ದೇಶಕ್ಕೆ ಮಂಗಳೂರಿಗೆ ಆಗಮಿಸಿದ್ದರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಕೆಲವರು ವ್ಯಾಪಾರ, ಶಿಕ್ಷಣ, ಕಲಿಕೆ ಮತ್ತಿತರ ಕಾರ್ಯ ನಿಮಿತ್ತ ಮಂಗಳೂರಿಗೆ ಬಂದಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೇಳಿಕೆ ನೀಡಲು ಹಲವರು ಹಾಜರು
‘ಎಂದಿನಂತೆ ಡಿ.19ರಂದು ನನ್ನ ಇಬ್ಬರು ಮಕ್ಕಳು ಕಾಲೇಜಿಗೆ ತೆರಳಿದ್ದರು. ಕಾಲೇಜು ಮುಗಿಸಿ ಮನೆಗೆ ಮರಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಮನೆಗೆ ನೋಟಿಸ್ ಬಂದಿದ್ದು, ಪುತ್ರರಾದ ಶಾಲಿಕ್, ಸಲೀಂ ಠಾಣೆಗೆ ಹಾಜರಾಗಲು ತಿಳಿಸಲಾಗಿತ್ತು’ ಎಂದು ವಿಚಾರಣೆಗೆ ಸಂಬಂಧಿಸಿದಂತೆ ಶನಿವಾರ ಬಂದರ್ ಠಾಣೆಗೆ ಹಾಜರಾದ ಮಂಜೇಶ್ವರ ನಿವಾಸಿ ಅಬ್ದುಲ್ ಹಮೀದ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
‘ಮಂಗಳೂರಿನ ಖಾಸಗಿ ಶಾಲೆಯಲ್ಲಿ ಪುತ್ರನೋರ್ವ ಪದವಿ ವಿದ್ಯಾರ್ಥಿಯಾಗಿದ್ದರೆ, ಮತ್ತೋರ್ವ ಪಿಯುಸಿ ಕಲಿಯುತ್ತಿದ್ದಾನೆ. ಅಂದು ಮಧ್ಯಾಹ್ನ 2:30ರ ಸುಮಾರಿಗೆ ಮಕ್ಕಳು ಸ್ಟೇಟ್ಬ್ಯಾಂಕ್ಗೆ ಬಂದಿದ್ದಾರೆ. ಬಸ್ ಇಲ್ಲದ ಕಾರಣ ರೈಲು ಮೂಲಕ ಊರಿಗೆ ಮರಳಿದ್ದರು. ವಿದ್ಯಾರ್ಥಿಗಳಲ್ಲದೆ ಮೀನು ಮಾರುವ ಕಾರ್ಮಿಕರು, ಮಹಿಳೆಯರ ಸಹಿತ ಗಡಿಭಾಗದ ಬಹಳಷ್ಟು ಮಂದಿಗೆ ನೋಟಿಸ್ ಬಂದಿತ್ತು. ಕರ್ನಾಟಕ-ಕೇರಳ ಗಡಿಭಾಗದ 20ಕ್ಕೂ ಹೆಚ್ಚು ಮಂದಿ ಇಂದು (ಶನಿವಾರ) ವಿಚಾರಣೆಗೆ ಹಾಜರಾಗಿದ್ದಾರೆ’ ಎಂದು ಹಮೀದ್ ತಿಳಿಸಿದರು.
‘ವಸ್ತುಗಳನ್ನು ಖರೀದಿಸಲು ಕೇರಳದಿಂದ ಮಂಗಳೂರಿಗೆ ಬಂದವರ ಮೇಲೂ ನೋಟಿಸ್ ಜಾರಿಗೊಳಿಸಲಾಗಿದೆ. ಹಲವು ವಿದ್ಯಾರ್ಥಿಗಳು ನೋಟಿಸ್ಗೆ ಭೀತಿಗೊಂಡು, ಶಾಲಾ-ಕಾಲೇಜನ್ನು ಮೊಟಕುಗೊಳಿಸಿದ್ದಾರೆ. ಇನ್ನು ಕೆಲವರು ಮಂಗಳೂರಿಗೆ ಬರುವುದನ್ನೇ ಬಿಟ್ಟಿದ್ದಾರೆ’ ಎಂದು ಹಮೀದ್ ಆತಂಕ ವ್ಯಕ್ತಪಡಿಸಿದರು.
‘ನಾನು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ಪೊಲೀಸರಿಗೆ ಸರಿ ಕಾಣಲಿಲ್ಲವೋ ಏನೋ... ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರ ಲ್ಲದೆ, ನನ್ನ ಫೋಟೊವನ್ನು ಕೂಡ ಕ್ಲಿಕ್ಕಿಸಿಕೊಂಡರು’ ಎಂದು ಹಮೀದ್ ತಿಳಿಸಿದ್ದಾರೆ.
ತಂದೆ, ಮಗನಿಗೆ ನೋಟಿಸ್
ನಾನು ಕಳೆದ ಹಲವು ವರ್ಷದಿಂದ ಮೀನಿನ ಟೆಂಪೊದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಡಿ.19ರಂದು ಬೆಳಗ್ಗೆ 10ಕ್ಕೆ ಬಂದರ್ ದಕ್ಕೆಗೆ ಮೀನು ಸಾಗಿಸಲು ಬಂದಿದ್ದೆ. ಆದರೆ ಮೀನು ಸಿಗದ ಕಾರಣ ಮಧ್ಯಾಹ್ನ ಬಂದರ್ನ ಮಸೀದಿಗೆ ತೆರಳಿ ನಮಾಝ್ ಮಾಡಿ ಮನೆಗೆ ಮರಳಿದ್ದೆ. ರಾತ್ರಿ 8ಕ್ಕೆ ಮೀನು ಇದೆ ಎಂಬ ಮಾಹಿತಿ ಸಿಕ್ಕಿದ ಕಾರಣ ಮಗನೊಂದಿಗೆ ಬೈಕ್ನಲ್ಲಿ ಮತ್ತೆ ಬಂದರ್ ದಕ್ಕೆಗೆ ಹೋಗಿದ್ದೆ. ಮಗ ಮರಳಿ ಬೈಕ್ನಲ್ಲಿ ಬಂದರೆ, ನಾನು ಮೀನು ಹೇರಿಕೊಂಡ ಟೆಂಪೊವನ್ನು ಕೇರಳಕ್ಕೆ ಸಾಗಿಸಿದ್ದೆ ಎಂದು ಮಂಜೇಶ್ವರ ಮಾಡ ನಿವಾಸಿ ಅಬ್ದುರ್ರಝಾಕ್ ತಿಳಿಸಿದ್ದಾರೆ.
ನನ್ನ ಮಗ ಮೂಸಾ ಮಂಗಳೂರಿನಲ್ಲಿ ಟ್ಯೂಶನ್ ಪಡೆಯುತ್ತಿದ್ದಾನೆ. ಡಿ.19ರಂದು ಕೂಡ ಆತ ಮಂಗಳೂರಿಗೆ ಬಂದು ಟ್ಯೂಶನ್ ಮುಗಿಸಿ ಮನೆಗೆ ಮರಳಿದ್ದ. ಅಂದು ರಾತ್ರಿ ಸಾಗಾಟಕ್ಕೆ ಮೀನು ಇದೆ ಎಂಬ ಮಾಹಿತಿ ಬಂದ ಮೇರೆಗೆ ನಾನು ಮಗನನ್ನು ಕರೆದು ಮಂಗಳೂರಿಗೆ ಬಂದು ಮೀನು ಲೋಡ್ ಆದ ಬಳಿಕ ಟೆಂಪೊ ಚಲಾಯಿಸಿಕೊಂಡು ಹೋದೆ. ಡಿ.19ರಂದು ನಾನು ಮತ್ತು ನನ್ನ ಮಗನು ಎಂದಿನಂತೆ ನಮ್ಮ ನಮ್ಮ ಕೆಲಸ-ಕಾರ್ಯಗಳಿಗೆ ಮಂಗಳೂರಿಗೆ ಬಂದಿದ್ದೇವೆಯೇ ವಿನಃ ಬೇರೆ ಯಾವ ಕಾನೂನು ಬಾಹಿರ ಚಟುವಟಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ. ಆದರೂ ಮೊನ್ನೆ ಪೊಲೀಸರಿಂದ ನೋಟಿಸ್ ಬಂದಿದೆ. ಇದರಿಂದ ನಮಗೆ ಗೊಂದಲವಾಗಿದೆ ಎಂದು ರಝಾಕ್ ಆತಂಕ ವ್ಯಕ್ತಪಡಿಸಿದ್ದಾರೆ.
ನೋಟಿಸ್ ಕೊಟ್ಟಿಲ್ಲ
ಈ ಬಗ್ಗೆ ಬಂದರ್ ಠಾಣೆ ಇನ್ಸ್ಪೆಕ್ಟರ್ ಗೋವಿಂದರಾಜುರನ್ನು ವಾರ್ತಾಭಾರತಿ ಸಂಪರ್ಕಿಸಿದಾಗ, ‘ಪೊಲೀಸ್ ಇಲಾಖೆಯಿಂದ ಯಾವುದೇ ನೋಟಿಸ್ ಕಳುಹಿಸಿಲ್ಲ. ಯಾರನ್ನೂ ವಿಚಾರಣೆಗೆ ಒಳಪಡಿಸಿಲ್ಲ’ ಎಂದು ಹೇಳಿದ್ದಾರೆ.
ಆದರೆ, ಪೊಲೀಸರು ಕಳುಹಿಸಿದ ನೋಟಿಸ್ ‘ವಾರ್ತಾಭಾರತಿ’ಗೆ ಲಭಿಸಿದ್ದು, ಅದರಲ್ಲಿ ಭಾರತೀಯ ದಂಡ ಸಂಹಿತೆಯ 143 (ಕಾನೂನುಬಾಹಿರ ಗುಂಪುಗೂಡಿವಿಕೆ), 147 (ಗಲಭೆಯಲ್ಲಿ ಭಾಗಿ), 148 (ಅಕ್ರಮ ಆಯುಧ ಹೊಂದುವಿಕೆ), 188 (ನಿಷೇಧಾಜ್ಞೆ ಉಲ್ಲಂಘನೆ), 353 (ಹಲ್ಲೆ), 332 (ಕರ್ತವ್ಯಕ್ಕೆ ಅಡ್ಡಿ), 324 (ಹಿಂಸೆ), 427 (ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ), 307 (ಕೊಲೆಯತ್ನ), 120 ಬಿ (ಪಿತೂರಿ) ಸಹಿತ ಹಲವು ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ.