ದೇರಳಕಟ್ಟೆ: ಮಾರುತಿ ಓಮ್ನಿ ಢಿಕ್ಕಿ;ಮೂವರಿಗೆ ಗಾಯ
ಮಂಗಳೂರು, ಜ.19: ದೇರಳಕಟ್ಟೆ ಸಮೀಪದ ವಿದ್ಯಾರತ್ನ ಸ್ಕೂಲ್ ಬಳಿ ಮಾರುತಿ ಒಮ್ನಿಯೊಂದು ಚಾಲಕಿಯ ನಿರ್ಲಕ್ಷ್ಯ ದಿಂದ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಕೊಣಾಜೆಯ ಅಡ್ಕರೆಪಡ್ಪು ಕಡೆಯಿಂದ ದೇರಳಕಟ್ಟೆ ವಿದ್ಯಾರತ್ನ ಶಾಲೆಯ ಬಳಿಯ ರಸ್ತೆಯಾಗಿ ಬಂದ ಮಾರುತಿ ಓಮ್ನಿಯು ಶನಿವಾರ ಬೆಳಗ್ಗೆ 10:15ರ ವೇಳೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯರೇ ಆದ ರಮೀನಾಬಿ ಮತ್ತವರ ಸೊಸೆಯಂದಿರಾದ ಸಲೀಕಾ ಬಾನು ಹಾಗೂ ರೆಹನಾ ಬಾನು ಅವರಿಗೆ ಢಿಕ್ಕಿ ಹೊಡೆಯಿತು. ಇದರಿಂದ ರಮೀನಾಬಿ ಮತ್ತು ಸಲೀಕಾ ಬಾನು ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೆಹನಾ ಬಾನು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಡ್ಕರೆಪಡ್ಪುವಿನಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ದೇರಳಕಟ್ಟೆಯತ್ತ ಸಾಗಿ ಬಂದ ಮಾರುತಿ ಓಮ್ನಿಯು ಚಾಲಕಿಯ ನಿಯಂತ್ರಣ ತಪ್ಪಿ ಪಾದಚಾರಿಗಳಿಗೆ ಢಿಕ್ಕಿ ಹೊಡೆಯಿತು. ಪಕ್ಕದಲ್ಲೇ ವಿದ್ಯುತ್ ಕಂಬವೊಂದು ಇದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿತು ಎನ್ನಲಾಗಿದೆ. ಅಪಘಾತದ ದೃಶ್ಯವು ವಿದ್ಯಾರತ್ನ ಶಾಲೆಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ರಮೀನಾಬಿ ಅವರ ಮಗ ರಹ್ಮಾನ್ ನೀಡಿದ ದೂರಿನಂತೆ ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.