ಕಾಂಚನೋತ್ಸವದಲ್ಲಿ `ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ'
ಉಪ್ಪಿನಂಗಡಿ : ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಪ್ರಸ್ತುತ ಪಡಿಸುವ 66ನೇ ವರ್ಷದ ಕಲಾಸೇವೆಯ 'ಕಾಂಚನೋತ್ಸವ 2020', ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ಹಾಗೂ ಸ್ಥಾಪಕ ಗುರುಗಳಾದ ಸಂಗೀರತ್ನ ಕಾಂಚನ ವೆಂಕಟಸುಬ್ರಹ್ಮಣ್ಯಂ ಮತ್ತು ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯ ದಿನಾಚರಣೆ ಅಂಗವಾಗಿ ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.
ಖ್ಯಾತ ಕಲಾವಿದರಾದ ವಿದ್ವಾನ್ ಶ್ರೀವೆಲ್ಸನ್ ಜೆ.ಮೆನನ್(ಹಾಡುಗಾರಿಕೆ), ವಿದ್ವಾನ್ ಎಡಪಲ್ಲಿ ಅಜಿತ್ (ಪಿಟೀಲು) ಹಾಗೂ ವಿದ್ವಾನ್ ಕೆ.ಯು.ಜಯಚಂದ್ರ ರಾವ್ (ಮೃದಂಗ)ರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು. ನೂರಾರು ಮಂದಿ ಸಂಗೀತಾಸ್ತಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದಕ್ಕೂ ಮೊದಲು ವಿದ್ವಾನ್ ಸಂಜಯ್ ನಾಗ್(ಹಾಡುಗಾರಿಕೆ), ವಿದ್ವಾನ್ ಪ್ರಣವ್ ಮಂಜುನಾಥ್(ಪಿಟೀಲು), ವಿದ್ವಾನ್ ದಾಶರಥಿ ಕಶ್ಯಪ್(ಮೃದಂಗ)ರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಸಿಕೊಟ್ಟರು. ನಂತರ ಉಪ್ಪಿನಂಗಡಿಯ ಗಾನಭಾರತೀ ಸಂಗೀತ ಶಾಲೆ ಉಪ್ಪಿನಂಗಡಿ, ಕಾಂಚನ ಸುಬ್ಬರತ್ನಂ ಸಂಗೀತ ಶಾಲೆ ಪುತ್ತೂರು, ಸರಸ್ವತೀ ಸಂಗೀತ ಶಾಲೆ ಸುಬ್ರಹ್ಮಣ್ಯ, ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ವಿದ್ಯಾರ್ಥಿಗಳಿಂದ ಹಾಗೂ ಅತಿಥಿ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಿತು.
ವಿದ್ವಾನ್ ಕಲಾಮಂಡಲಂ ವಾಸುದೇವನ್ ಮತ್ತು ಸಹ ಕಲಾವಿದರಿಂದಲೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಸತ್ಯನಾರಾಯಣ ಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆಯೂ ನಡೆಯಿತು. ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಟ್ರಸ್ಟ್ ನ ಕಾರ್ಯದರ್ಶಿ ಕೆ.ರೋಹಿಣಿ ಸುಬ್ಬರತ್ನಂ ಹಾಗೂ ಕಾಂಚನ ಮನೆಯವರು ಸಂಗೀತಾಸಕ್ತರನ್ನು ಬರಮಾಡಿಕೊಂಡರು.