ಪ್ರತಿಭಟನೆಗೆ ಸಂಬಂಧವೇ ಇಲ್ಲದ ಅಮಾಯಕರ ಮೇಲೆ ದೌರ್ಜನ್ಯ: ಜನತಾ ನ್ಯಾಯಾಲಯದ ವರದಿ
ಡಿ.19ರ ಮಂಗಳೂರು ಹಿಂಸಾಚಾರ- ಗೋಲಿಬಾರ್ ಪ್ರಕರಣ
# ಸಂಪೂರ್ಣ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹ
ಮಂಗಳೂರು, ಜ.21: ನಗರದಲ್ಲಿ ಡಿಸೆಂಬರ್ 19ರಂದು ನಡೆದ ಹಿಂಸಾಚಾರ ಹಾಗೂ ಪೊಲೀಸ್ ಗೋಲಿಬಾರ್ ಸೇರಿದಂತೆ ಸಂಪೂರ್ಣ ಪ್ರಕರಣದಲ್ಲಿ ಘಟನೆಗೆ ಸಂಬಂಧವೇ ಇಲ್ಲದ ಅಮಾಯಕರ ಮೇಲೆ ದೌರ್ಜನ್ಯವಾಗಿದೆ. ಬಲಿಪಶುಗಳ ಕುಟುಂಬಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದೆ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಗೋಪಾಲಗೌಡ ನೇತೃತ್ವದ ‘ಜನತಾ ನ್ಯಾಯಾಲಯ’ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಮಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಾಧೀಶ ಗೋಪಾಲ ಗೌಡ ನೇತೃತ್ವದಲ್ಲಿ ರಾಜ್ಯ ಹೈಕೋರ್ಟ್ನ ಸರಕಾರಿ ಅಭಿಯೋಜಕ ಬಿ.ಟಿ.ವೆಂಕಟೇಶ್, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜುರನ್ನು ಒಳಗೊಂಡ ತಂಡವು ಡಿ.19ರ ಮಂಗಳೂರಿನ ಘಟನೆಗೆ ಸಂಬಂಧಿಸಿ ಜನವರಿ 6 ಮತ್ತು 7ರಂದು ‘ಜನತಾ ನ್ಯಾಯಾಲಯ’ದ ಮೂಲಕ ಅಹವಾಲು ಸ್ವೀಕರಿಸಿತ್ತು. ಅಲ್ಲದೆ ಘಟನಾ ಸ್ಥಳ, ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತ್ತು. ಜನತಾ ನ್ಯಾಯಾಲಯ ತಂಡ ಇಂದು ತಮ್ಮ ಅವಲೋಕನದ 32 ಪುಟಗಳ ವಿಸ್ತೃತ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದೆ.
ಡಿ.19ರ ಘಟನೆಯಿಂದಾಗಿ ಬಲಿಪಶುಗಳಾದವರ ಜೀವನೋಪಾಯಕ್ಕೆ ತೀವ್ರ ಪರಿಣಾಮ ಬೀರಿದೆ. ಬಹುಮುಖ್ಯವಾಗಿ ಎರಡು ಜೀವಗಳು ಬಲಿಯಾಗಿವೆ. ಮೃತರಾದ ಜಲೀಲ್ ಹಾಗೂ ನೌಶೀನ್ ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಆ ಕುಟುಂಬಗಳನ್ನು ರಕ್ಷಿಸಬೇಕು ಜತೆಗೆ ಸಮರ್ಪಕ ಪರಿಹಾರ ನೀಡಬೇಕು. ಇದಕ್ಕಾಗಿ ಸಂಪೂರ್ಣ ಘಟನೆಯ ಬಗ್ಗೆ ನ್ಯಾಯಾಂಗ ವಿಚಾರಣಾ ಆಯೋಗವನ್ನು (ಜುಡಿಶಿಯಲ್ ಕಮಿಷನ್ ಆಫ್ ಎನ್ಕ್ವಾಯರಿ) ರಚಿಸಿದರೆ ನ್ಯಾಯ ಹಾಗೂ ಸತ್ಯಾಂಶವನ್ನು ಬಹಿರಂಗಪಡಿಸಲು ಸಹಾಯವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪೊಲೀಸರಿಂದ ತಡೆ- ಗೊಂದಲ, ಆಕ್ಷೇಪದ ನಡುವೆಯೂ ಜನತಾ ನ್ಯಾಯಾಲಯ ತಂಡ ಮಂಗಳೂರು ಹಿಂಸಾಚಾರ ಘಟನೆ ಬಗ್ಗೆ ಅಹವಾಲು ಸ್ವೀಕಾರ ಕಾರ್ಯವನ್ನು ನಡೆಸಿತ್ತು. ಜನತಾ ನ್ಯಾಯಾಲಯದ ವರದಿಯ ಮುಖ್ಯಾಂಶಗಳು: ಜನತಾ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಹೇಳಿಕೆಗಳ ಪ್ರಕಾರ ನಗರದಲ್ಲಿ ಸೆಕ್ಷನ್ 144 ವಿಧಿಸಿರುವುದು ಅನಗತ್ಯ ಎಂಬುದನ್ನು ಗಮನಿಸಲಾಗಿದೆ. ಸೆಕ್ಷನ್ ವಿಧಿಸುವಂತಹ ಯಾವುದೇ ಪರಿಸ್ಥಿತಿ ನಗರದಲ್ಲಿ ಇರಲಿಲ್ಲ. ಅದಾಗ್ಯೂ ಡಿ.18ರಂದು ಮಂಗಳೂರು ಪೊಲೀಸ್ ಆಯುಕ್ತರು ಸೆಕ್ಷನ್ 144 ವಿಧಿಸಿದ ಬಗ್ಗೆ ಆ ಪ್ರದೇಶದ ಜನರಿಗೆ ಪರಿಣಾಮಕಾರಿಯಾಗಿ ತಿಳಿಸಲಾಗಿಲ್ಲ. ಸೆಕ್ಷನ್ ವಿಧಿಸಿದ ನಂತರ ಪ್ರತಿಭಟನೆಗೆ ಹಿಂದೆ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆಯಲಾಯಿತು.
ವಿವೇಚನಾರಹಿತ ಲಾಠಿಚಾರ್ಜ್- ಗೋಲಿಬಾರ್
ಸೂಕ್ತ ಮಾಹಿತಿಯ ಕೊರತೆಯಿಂದಾಗಿ ಪ್ರತಿಭಟನೆಗೆ ಯಾವುದೇ ಸಂಬಂಧವಿಲ್ಲದ ನಾಗರಿಕರ ಮೇಲೆ ಪೊಲೀಸರು ವಿವೇಚನಾರಹಿತವಾಗಿ ಲಾಠಿಚಾರ್ಜ್ ಮಾಡಿದ್ದಾರೆ ಮತ್ತು ಗೋಲಿಬಾರ್ ನಡೆಸಲಾಗಿದೆ. ತಂಡದ ಎದುರು ಬಲಿಪಶುಗಳಿಂದ ಸಲ್ಲಿಕೆಯಾದ ಸಾಕ್ಷ್ಯಗಳು ಹಿಂಸಾಚಾರದ ಸ್ಥಳದಲ್ಲಿ ಹಾಜರಿದ್ದ ಪೊಲೀಸ್ ಸಿಬ್ಬಂದಿ ಜವಾಬ್ದಾರಿಯನ್ನು ಮರೆತಿರುವುದನ್ನು ಪ್ರದರ್ಶಿಸಿದೆ.
ಕರ್ನಾಟಕ ಪೊಲೀಸ್ ಕೈಪಿಡಿ ಮೀರಿದ ವರ್ತನೆ
ಕರ್ನಾಟಕ ರಾಜ್ಯ ಪೊಲೀಸ್ ಪಡೆಯ ನೀತಿ ಸಂಹಿತೆಯ ಅಧ್ಯಾಯ 1ರಲ್ಲಿ ನಿಗದಿಪಡಿಸಿದಂತೆ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಪೊಲೀಸ್ ಅಧಿಕಾರಿಗಳ ಮುಖ್ಯ ಜವಾಬ್ದಾರಿ. ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರ ಮತ್ತು ಕಾರ್ಯಗಳ ಮಿತಿಗಳನ್ನು ಗೌರವಿಸಬೇಕು. ಆದರೆ, ಡಿಸೆಂಬರ್ 19ರಂದು ಹಾಜರಿದ್ದ ಪೊಲೀಸ್ ಸಿಬ್ಬಂದಿಯ ಕ್ರಮಗಳು ಕರ್ನಾಟಕ ಪೊಲೀಸ್ ಕೈಪಿಡಿಯಲ್ಲಿರುವ ಅಧಿಕಾರವನ್ನು ಗಮನಾರ್ಹವಾಗಿ ಉಲ್ಲಂಘಿಸಿದೆ.
ಪೊಲೀಸ್ ಅಧಿಕಾರಿಗಳಿಂದ ನಿಂದನೀಯ ಹೇಳಿಕೆಗಳು
ಲಾಠಿಚಾರ್ಜ್ ಮತ್ತು ಗೋಲಿಬಾರ್ ಆರಂಭವಾಗುವ ಮೊದಲು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ವಿಫಲವಾಗಿರುವ ಹೊರತಾಗಿಯೂ ಘಟನಾ ಸ್ಥಳದಲ್ಲಿದ್ದ ಪೊಲೀಸ್ಅಧಿಕಾರಿಗಳು ಪ್ರತಿಭಟನಾಕಾರರನ್ನು ಕೆರಳಿಸಿದ್ದಾರೆ ಮತ್ತು ನಿಂದನೀಯ ಭಾಷೆಯನ್ನು ಪ್ರಯೋಗಿಸಿದ್ದಾರೆ ಎಂಬುದು ಸಂತ್ರಸ್ತರು ಹಾಗೂ ಪ್ರತ್ಯಕ್ಷದರ್ಶಿಗಳ ಆರೋಪವಾಗಿದೆ. ಮಾಜಿ ಮೇಯರ್ ಅಶ್ರಫ್ ಮತ್ತು ಅಫ್ನಾನ್ ಅವರ ಹೇಳಿಕೆಗಳು ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯವನ್ನು ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಕೋಮುವಾದಿ ಹಾಗೂ ಅವಾಚ್ಯ ಶಬ್ದಗಳ ಬಳಕೆಯನ್ನು ವಿವರಿಸಿದೆ.
ಎಂ.ಎಂ. ಕಿಣಿ ರೈಫಲ್ ಅಂಗಡಿ- ಬಂದರು ಪೊಲೀಸ್ ಠಾಣೆ
ನಾಗರಿಕರ ಮೇಲೆ ಪೊಲೀಸರು ಬಲ ಪ್ರಯೋಗಕ್ಕೆ ಪ್ರಮುಖ ಕಾರಣ ಎಂದು ಉಲ್ಲೇಖಿಸಲಾಗಿರುವ ಎಂ.ಎಂ.ಕಿಣಿ ರೈಫಲ್ ಅಂಗಡಿಗೆ ಉಂಟಾದ ಹಾನಿ ಹಾಗೂ ಸಾರ್ವಜನಿಕರಿಂದ ಬಂದರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ದೃಶ್ಯಗಳು, ಈ ಬಗ್ಗೆ ಕೆಲ ಎಫ್ಐಆರ್ಗಳಲ್ಲೂ ಉಲ್ಲೇಖಿಸಲಾಗಿದ್ದು, ಸಂತ್ರಸ್ತರು ಪದೇ ಪದೇ ವಿನಂತಿಸಿದರೂ ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸ್ ಅಧಿಕಾರಿಗಳು ನೀಡಿಲ್ಲ. ಡಿಸೆಂಬರ್ 19ರ ಹಿಂಸಾಚಾರಕ್ಕೆ ಒಳಗಾದ ಸಂತ್ರಸ್ತರು ಅಪಾರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸಂತ್ರಸ್ತರ ಆರೋಪಗಳ ಪ್ರಕಾರ ಪೊಲೀಸರ ನಡೆಯನ್ನು ಪ್ರಶ್ನಿಸುವಂತಾಗಿದೆ. ಘಟನಾ ಸ್ಥಳದಲ್ಲಿ ಹಾಜರಿದ್ದ ಪತ್ರಕರ್ತರ ಹೇಳಿಕೆಯ ಪ್ರಕಾರ ಪೊಲೀಸ್ ಅಧಿಕಾರಿಗಳಿಗೆ ತಮ್ಮನ್ನು ಗುರುತಿಸಿಕೊಂಡ ನಂತರವೂ ಪತ್ರಕರ್ತರ ಮೇಲೆ ದೌರ್ಜನ್ಯ ನಡೆಸಿರುವುದು ಮಾಧ್ಯಮಗಳ ಮೇಲಿನ ದಬ್ಬಾಳಿಕೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆಸ್ಪತ್ರೆಯ ಆವರಣದಲ್ಲಿ ಅಶ್ರುವಾಯು
ಆಸ್ಪತ್ರೆಯ ಆವರಣದಲ್ಲಿ ಅಶ್ರುವಾಯು ಬಳಸಲಾಗಿದೆ ಎಂದು ಹೈಲ್ಯಾಂಡ್ಆಸ್ಪತ್ರೆಯ ಆಡಳಿತಾಧಿಕಾರಿ ಹೇಳಿದ್ದಾರೆ. ಲಭ್ಯವಿರುವ ವೀಡಿಯೋ ದೃಶ್ಯಾವಳಿಯಿಂದ ಪೊಲೀಸರು ಆಸ್ಪತ್ರೆಯ ಆವರಣಕ್ಕೆ ಯಾಕೆ ಪ್ರವೇಶಿಸಿದರು ಮತ್ತು ಯಾಕೆ ಅಶ್ರುವಾಯು ಬಳಸಲು ಮುಂದಾದರು ಎಂಬುದು ಸ್ಪಷ್ಟವಾಗಿಲ್ಲ. ಇದನ್ನು ಸಮರ್ಥಿಸುವ ಯಾವುದೇ ಕಾರಣಗಳನ್ನು ಪೊಲೀಸ್ ಅಧಿಕಾರಿಗಳು ನೀಡಿಲ್ಲ.
ಮಾನವ ಹಕ್ಕುಗಳ ಮಾನದಂಡಗಳ ಸ್ಪಷ್ಟ ಉಲ್ಲಂಘನೆ
ಕಾನೂನು ಜಾರಿ ಅಧಿಕಾರಿಗಳ ನೀತಿ ಸಂಹಿತೆಯ 2ನೇ ವಿಧಿಯು, ಕಾನೂನು ಜಾರಿ ಅಧಿಕಾರಿಗಳು ಮಾನವ ಹಕ್ಕುಗಳ ಮಾನದಂಡಗಳನ್ನು ಗೌರವಿಸಬೇಕು ಮತ್ತು ಮಾನವ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಹೇಳುತ್ತದೆ. ಡಿಸೆಂಬರ್ 19ರ ಘಟನೆಯ ಹಿನ್ನೆಲೆಯನ್ನು ಗಮನಿಸುವಾಗ ಹಾಗೂ ನಾಗರಿಕರ ವಿರುದ್ಧ ಬಳಸಲಾದ ಅಧಿಕಾರಿಗಳ ಬಲ ಪ್ರಯೋಗವನ್ನು ಅವಲೋಕಿಸಿದಾಗ ನೀತಿ ಸಂಹಿತೆಯ ವಿಧಿಯನ್ನೇ ಟೊಳ್ಳಾಗಿಸಿದಂತಾಗಿದೆ ಎಂದು ಜನತಾ ನ್ಯಾಯಾಲಯದ ವರದಿ ಉಲ್ಲೇಖಿಸಿದೆ.
ನ್ಯಾಯಾಂಗ ತನಿಖೆಗೆ ಆಗ್ರಹ: ಡಿ.19ರಂದು ನಡೆದ ಗೋಲಿಬಾರ್ಗೆ ಇಬ್ಬರು ಬಲಿಯಾಗಿದ್ದು, ಮೃತ ಜಲೀಲ್ ಹಾಗೂ ನೌಶೀನ್ ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಆ ಕುಟುಂಬಗಳನ್ನು ರಕ್ಷಿಸಬೇಕು. ಸೂಕ್ತ ಪರಿಹಾರ ನೀಡಬೇಕು. ಘಟನೆಯ ಬಗ್ಗೆ ನ್ಯಾಯಾಂಗ ಆಯೋಗದ ಮೂಲಕ ತನಿಖೆ ನಡೆಸಿದರೆ ಮಾತ್ರ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
‘ಮಂಗಳೂರು ಗಲಭೆ ಘಟನೆ ಸಂಬಂಧ ಸಂಪೂರ್ಣ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಿ ಸತ್ಯಾಂಶ ಬೆಳಕಿಗೆ ತರುವ ಮೂಲಕ ಸಾರ್ವಜನಿಕರು ಮತ್ತು ಪೊಲೀಸರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ರಕ್ಷಣೆ ಮತ್ತು ಸೂಕ್ತ ಪರಿಹಾರದ ಅಗತ್ಯವಿದೆ’
-ನ್ಯಾ.ವಿ.ಗೋಪಾಲಗೌಡ ನೇತೃತ್ವದ ನ್ಯಾಯ ಮಂಡಳಿ