ಸ್ಫೋಟಕ ‘ಪತ್ತೆ-ನಾಶ’ದ ಹಿಂದೆ ಅನುಮಾನವಿದೆ: ದಿನೇಶ್ ಹೆಗ್ಡೆ ಉಳೆಪ್ಪಾಡಿ
ಎನ್ಆರ್ಸಿ-ಸಿಎಎ-ಎನ್ಪಿಆರ್ ವಿರುದ್ಧ ಕಸಬಾ ಬೆಂಗರೆಯಲ್ಲಿ ಪ್ರತಿಭಟನೆ
ಮಂಗಳೂರು, ಜ. 21: ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಎನ್ಆರ್ಸಿ-ಸಿಎಎ-ಎನ್ಪಿಆರ್ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು ಏರುತ್ತಿದೆ. ಮಂಗಳೂರಿನಲ್ಲಿ ಇಬ್ಬರು ಅಮಾಯಕ ಯುವಕರನ್ನು ಪೊಲೀಸರು ಬಲಿ ಪಡೆದುಕೊಂಡ ಬಳಿಕ ಹೋರಾಟದ ಕಿಚ್ಚು ಹೆಚ್ಚುತ್ತಿದೆ. ಇದರಿಂದ ಮಂಗಳೂರು ಪೊಲೀಸರು ‘ಹರ್ಷ’ಗೊಂಡಿಲ್ಲ. ಈ ಮಧ್ಯೆ ಸೋಮವಾರ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ‘ಪತ್ತೆ ಮತ್ತು ನಾಶ’ದ ಹಿಂದೆ ಅನುಮಾನವಿದೆ. ಈ ಬಗ್ಗೆ ಸತ್ಯಾಂಶವನ್ನು ತಿಳಿಯುವ ಕುತೂಹಲ ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಇದೆ ಎಂದು ಖ್ಯಾತ ನ್ಯಾಯವಾದಿ ಮತ್ತು ಮಾನವ ಹಕ್ಕು ಹೋರಾಟಗಾರ ದಿನೇಶ್ ಹೆಗ್ಡೆ ಉಳೆಪ್ಪಾಡಿ ಹೇಳಿದರು.
ಸಂವಿಧಾನ ಸಂರಕ್ಷಣಾ ಸಮಿತಿ ಕಸಬಾ ಬೆಂಗರೆ ಇದರ ವತಿಯಿಂದ ಎನ್ಆರ್ಸಿ-ಸಿಎಎ-ಎನ್ಪಿಆರ್ ವಿರುದ್ಧ ಬೆಂಗರೆಯ ಫುಟ್ಬಾಲ್ ಗ್ರೌಂಡ್ನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಎನ್ಆರ್ಸಿ ವಿರುದ್ಧದ ಆಕ್ರೋಶ ಹೆಚ್ಚುತ್ತಿದೆ. ಈ ಸಂದರ್ಭವೇ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ‘ಪತ್ತೆ’ ಸುದ್ದಿಯಿಂದಾಗಿ ಜನರ ಮನಸ್ಸು ಅತ್ತ ವಾಲಿದೆ. ಚರ್ಚೆಯೂ ಆಗಿದೆ. ಆ ‘ಸ್ಫೋಟಕ’ ಏನು ಎಂಬುದನ್ನು ತಿಳಿಯುವ ಮುನ್ನವೇ ತುರ್ತಾಗಿ ನಾಶ ಮಾಡಿದುದು ಕೂಡ ಸಂಶಯಕ್ಕೆ ಎಡೆ ಮಾಡಿಕೊಟ್ಟಿವೆ ಎಂದ ದಿನೇಶ್ ಹೆಗ್ಡೆ ಉಳೆಪ್ಪಾಡಿ ಕೆಲವು ವರ್ಷದ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದ ಗಿರೀಶ್ ಮಟ್ಟಣವರ್ ಎಂಬವರು ವಿಧಾನಸೌಧಕ್ಕೆ ಬಾಂಬಿಟ್ಟು ಸುದ್ದಿಯಾಗಿದ್ದರು. ಬಳಿಕ ಅದೇ ವ್ಯಕ್ತಿಯನ್ನು ಬಿಜೆಪಿಗರು ತಮ್ಮತ್ತ ಸೆಳೆದುಕೊಂಡರು. ಭಯೋತ್ಪಾದಕರ ಬಗ್ಗೆ ಬಿಜೆಪಿಗರ ನಿಲುವು ಏನು ಎಂಬುದು ಸ್ಪಷ್ಟವಾಗುತ್ತಿದೆ. ಹೀಗಿರುವಾಗ ಮಂಗಳೂರು ವಿಮಾನ ನಿಲ್ದಾಣದ ‘ಸ್ಫೋಟಕ’ ಪತ್ತೆಯ ಕುರಿತು ವಿಸ್ತೃತ ತನಿಖೆ ಮಾಡಬೇಕಾದ ಅಗತ್ಯವಿದೆ ಎಂದರು.
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶಕ್ಕೆ ವಿಷವಾಗಿ ಪರಿಣಮಿಸುತ್ತಿದ್ದಾರೆ. ದೇಶವಾಸಿಗಳನ್ನು ಬೀದಿಗೆ ತಳ್ಳಿರುವ ಅವರಿಗೆ ಆಡಳಿತ ನಡೆಸಲು ಗೊತ್ತಿಲ್ಲ ಎಂಬುದಕ್ಕೆ ಈ ಎನ್ಆರ್ಸಿ, ಸಿಎಎ, ಎನ್ಪಿಆರ್ಗಳೇ ಸಾಕ್ಷಿ. ದೇಶಕ್ಕೆ ಸಮಸ್ಯೆಯಾಗಿರುವ ಈ ಜೋಡಿಯ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದ ದಿನೇಶ್ ಹೆಗ್ಡೆ ಉಳೆಪ್ಪಾಡಿ, ಕಲ್ಲಡ್ಕದ ವ್ಯಕ್ತಿಯೊಬ್ಬರು ಇಲ್ಲಿನ ಮೂಲ ನಿವಾಸಿಗಳಾದ ಮುಸ್ಲಿಮರನ್ನು ವಿದೇಶದಿಂದ ಅತಿಥಿಗಳು ಎಂದು ವ್ಯಾಖ್ಯಾನಿಸತೊಡಗಿದ್ದಾರೆ. ಕರಾವಳಿಗೆ ಮುಸ್ಲಿಮರ ಕೊಡುಗೆ ಏನು ಎಂಬುದನ್ನು ಮೊದಲು ಅವರು ಅಧ್ಯಯನ ಮಾಡಿಕೊಳ್ಳಲಿ. ಆ ಬಳಿಕ ಮುಸ್ಲಿಮರ ವಿರುದ್ಧ ಮಾತನಾಡಲಿ ಎಂದರು.
ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದ ಎಸ್ಕೆಜೆಯು ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಝೀಝ್ ದಾರಿಮಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಭಯದ ವಾತಾವರಣ ಸೃಷ್ಟಿಸುವ ಚಾಳಿ ಹೆಚ್ಚುತ್ತಿದೆ. ಈ ಮಧ್ಯೆ ಸುಳ್ಳನ್ನು ಸತ್ಯವಾಗಿಸುವ, ದೌರ್ಜನ್ಯವನ್ನು ಮೆಟ್ಟಿ ನಿಲ್ಲುವ, ತಿರಂಗವನ್ನು ಎತ್ತಿ ಹಿಡಿಯುವ ಶಕ್ತಿಗಳು ದೇಶಾದ್ಯಂತ ಒಂದಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಆಡಳಿತ ವರ್ಗ, ಪೊಲೀಸರು ಗುಂಡಿನ ಮೂಲಕ ಪ್ರತಿಭಟನಾಕಾರರ ಧ್ವನಿ ಅಡಗಿಸಬಹುದು ಎಂದು ಭಾವಿಸಿದ್ದಾರೆ. ಆದರೆ, ಧ್ವನಿ ಅಡಗಿಸಲು ಸಾಧ್ಯವೇ ಇಲ್ಲ. ಮಂಗಳೂರಿನಲ್ಲಿ ಜಲೀಲ್ ಮತ್ತು ನೌಶೀನ್ರನ್ನು ಗುಂಡಿಕ್ಕಿ ಕೊಂದ ಬಳಿಕ ಜನರ ಆಕ್ರೋಶ ಹೆಚ್ಚುತ್ತಿವೆ. ಕಳೆದೊಂದು ತಿಂಗಳಲ್ಲಿ ಜಿಲ್ಲಾದ್ಯಂತ ಹಲವು ಪ್ರತಿಭಟನೆ ನಡೆದಿದೆ. ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು. ಜ.26ರ ಗಣರಾಜ್ಯೋತ್ಸವ ದಿನದಂದು ನಾಡಿನ 30 ನಗರಗಳಲ್ಲಿ 30 ಪ್ರತಿಭಟನೆಗಳನ್ನು ಎನ್ಆರ್ಸಿ-ಸಿಎಎ ವಿರುದ್ಧ ಆಯೋಜಿಸಲಾಗಿದೆ. ಇದು ಹೋರಾಟದ ಕಿಚ್ಚು ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ದೇಶ ಪ್ರೇಮಿಗಳು ಅಂಬೇಡ್ಕರ್ರಿಂದ ರಚಿಸಲ್ಪಟ್ಟ ಸಂವಿಧಾನ ಉಳಿಸಲು ಕಟಿಬದ್ಧರಾಗಿದ್ದಾರೆ. ಅದಕ್ಕಾಗಿಯೇ ಹೋರಾಡುತ್ತಿದ್ದಾರೆ. ಇದರ ವಿರುದ್ಧ ಮೌನ ತಾಳಿದರೆ ಮುಂದೊಂದು ದಿನ ‘ಹಿಂದೂ ರಾಷ್ಟ್ರ’ದ ಘೋಷಣೆ ಹೊರಬಿದ್ದೀತು. ಮನು ಸಿದ್ಧಾಂತ ಜಾರಿಯಾದೀತು. ಅದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕಿದೆ. ಬ್ರಿಟಿಷರ ಎಫ್ಐಆರ್ನಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್ ಸಿಂಗ್, ಅಫ್ಝಲ್ ಖಾನ್ ಹೆಸರಿಸಿರುವಾಗ, ಫ್ಯಾಶಿಸ್ಟ್ ಸರಕಾರವು ಜಲೀಲ್ ಮತ್ತು ನೌಶಿನರ್ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದುದರಲ್ಲಿ ಆಶ್ಚರ್ಯವಿಲ್ಲ. ಕರಾಳ ಕಾಯ್ದೆಗಾಗಿ ಜನನ ದಿನಾಂಕವನ್ನು ಆಡಳಿತ ಕೇಳುತ್ತಿದೆ. ಆದರೆ, ನಾವು ಜನನ ದಿನಾಂಕವನ್ನು ನೆನಪಿಟ್ಟುಕೊಳ್ಳುವುದಿಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಮರಣ ದಿನಾಂಕವನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಕೆಎಸ್ಎ ಕಾರ್ಯದರ್ಶಿ ಖಲೀಲ್ ತಲಪಾಡಿ ಹೇಳಿದರು.
ಕಾವಳಕಟ್ಟೆಯ ಖಾದಿಸಿಯ್ಯ ಸಂಸ್ಥೆಯ ಪ್ರಾಂಶುಪಾಲ ಸುಫಿಯಾನ್ ಸಖಾಫಿ, ಕಾರ್ಪೊರೇಟರ್ ಮುನೀಬ್ ಬೆಂಗರೆ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸಾಮಾಜಿಕ ಹೋರಾಟಗಾರ ಅಮೃತ ಶೆಣೈ, ಪಿಎಫ್ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಮಾತನಾಡಿದರು.
ಜಮಾಅತೆ ಇಸ್ಲಾಮೀ ಹಿಂದ್ನ ಬೆಂಗರೆ ವಲಯ ಅಧ್ಯಕ್ಷ ಅಬ್ದುಲ್ ಲತೀಫ್ ಆಲಿಯಾ, ಮಾಜಿ ಶಾಸಕ ಬಿಎ ಮೊಯ್ದಿನ್ ಬಾವಾ, ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್ ಉಪಸ್ಥಿತರಿದ್ದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಎಂ. ಅಸ್ಲಂ ಅಧ್ಯಕ್ಷತೆ ವಹಿಸಿದ್ದರು. ಕಸಬಾ ಬೆಂಗರೆಯ ಎಂಜೆಎಂ ಖತೀಬ್ ಶರೀಫ್ ದಾರಿಮಿ ದುಆಗೈದರು. ಬೆಂಗ್ರೆಯ ಎಆರ್ಕೆ ಮದ್ರಸದ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಸಮಿತಿಯ ಸಂಚಾಲಕ ಹಾಜಿ ಸುಲೈಮಾನ್ ಕೆಬಿಆರ್ ಸ್ವಾಗತಿಸಿದರು. ಸಹ ಸಂಚಾಲಕ ಬಿಲಾಲ್ ಮೊಯ್ದಿನ್ ವಂದಿಸಿದರು.
ಮಾಧ್ಯಮಗಳ ವಿರುದ್ಧ ಕಿಡಿ
ಪ್ರತಿಭಟನೆಯುದ್ದಕ್ಕೂ ಭಾಷಣಗಾರರು ನಾಡಿನ ಕೆಲವು ಮಾಧ್ಯಮಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎನ್ಆರ್ಸಿ ವಿರುದ್ಧ ಅಡ್ಯಾರ್ ಕಣ್ಣೂರಿನಲ್ಲಿ ನಡೆದ ಪ್ರತಿಭಟನೆಯನ್ನು ಕಣ್ಣಾರೆ ಕಾಣಲು ಈ ಮಾಧ್ಯಮದವರಿಗೆ ಸಾಧ್ಯವಾಗಲಿಲ್ಲ. ಆದರೆ, ಸಂಚಾರ ದಟ್ಟಣೆ ಕಡಿಮೆ ಮಾಡಲು ಉಳ್ಳಾಲ-ಬೆಂಗರೆ ಪ್ರದೇಶದಿಂದ ಅಡ್ಯಾರ್ ಕಣ್ಣೂರಿಗೆ ಜಲಮಾರ್ಗ (ದೋಣಿ) ಮೂಲಕ ಸಾಗಿದ್ದು ಈ ಮಾಧ್ಯಮದವರಿಗೆ ತಪ್ಪಾಗಿ ಕಂಡಿತು. ಬಜ್ಪೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಸ್ಫೋಟಕದ ಹಿಂದಿನ ವ್ಯಕ್ತಿಯನ್ನು ‘ಧರ್ಮ’ದ ಆಧಾರದ ಮೇಲೆ ತೂಗಿ ನೋಡುವ, ಮಾನಸಿಕ ಅಸ್ವಸ್ಥ ಎಂದು ತೇಲಿ ಬಿಡುವ ಷಡ್ಯಂತ್ರ ರೂಪಿಸದಿದ್ದರೆ ಸಾಕಿತ್ತು ಎಂದು ಭಾಷಣಗಾರರು ಮಾರ್ಮಿಕವಾಗಿ ನುಡಿದರು.
ದೋಣಿಯಲ್ಲೂ ಮೊಳಗಿದ ಆಝಾದ್ ಧ್ವನಿ: ಉಳ್ಳಾಲ ಕೋಟಪುರದಿಂದ ಕಸಬಾ ಬೆಂಗರೆಗೆ ‘ಚಲೋ’ಕೂಡ ನಡೆಯಿತು. ಉಳ್ಳಾಲ ಕೋಟೆಪುರ ಮೀನುಗಾರರ ಸಂಘದ ವತಿಯಿಂದ ಉಳ್ಳಾಲ ಕೋಟೆಪುರದಿಂದ ಕಸಬಾ ಬೆಂಗರೆಯಲ್ಲಿ ನಡೆಯುವ ಎನ್ಆರ್ಸಿ ವಿರುದ್ಧದ ಪ್ರತಿಭಟನೆಗೆ ಸುಮಾರು 60ಕ್ಕೂ ಅಧಿಕ ದೋಣಿಯ ಮೂಲಕ ಸಾವಿರಾರು ಪ್ರತಿಭಟನಾಕಾರರು ಆಗಮಿಸಿದರು. ಈ ಸಂದರ್ಭ ಪ್ರತಿಭಟನಾಕರರು ಆಝಾದ್ ಧ್ವನಿ ಮೊಳಗಿಸಿದರು. ಕೋಟೆಪುರ ಜುಮಾ ಮಸೀದಿಯ ಯು.ಕೆ. ಅಬ್ಬಾಸ್, ಉಳ್ಳಾಲ ಕೋಡಿ ಮಸೀದಿಯ ಅಬ್ದುಲ್ ಹಮೀದ್, ನಾಡದೋಣಿ ಸಂಘಟನೆಯ ಅಧ್ಯಕ್ಷ ಹನೀಫ್ ಮತ್ತಿತರರು ನೇತೃತ್ವ ವಹಿಸಿದ್ದರು.
ಫೆರಿ ಬೋಟ್ನಲ್ಲಿ ಉಚಿತ ಪ್ರಯಾಣ: ಮಂಗಳೂರು ಸಹಿತ ಬೇರೆ ಬೇರೆ ಕಡೆಯಿಂದ ಆಗಮಿಸಿದ ಪ್ರತಿಭಟಕಾರರಿಗೆ ಬಂದರ್ನಿಂದ ಕಸಬಾ ಬೆಂಗರೆಗೆ ತೆರಳುವ ಫೆರಿ ಬೋಟ್ನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿತ್ತು.