ರೇಣುಕಾಚಾರ್ಯರ ವಿರುದ್ಧ ಕ್ರಮಕ್ಕೆ ರಹೀಂ ಉಚ್ಚಿಲ್ ಮನವಿ
ಮಂಗಳೂರು, ಜ.22: ಮುಸ್ಲಿಂ ಸಮುದಾಯದ ಇರುದ್ದ ದ್ವೇಷಪೂರಿತ ಭಾಷಣವನ್ನು ಸಾರ್ವಜನಿಕವಾಗಿ ಮಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯರ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ ಕುಮಾರ್ ಕಟೀಲ್ಗೆ ಮನವಿ ಸಲ್ಲಿಸಿದ್ದಾರೆ.
ಹೊನ್ನಾಲಿಯಲ್ಲಿ ಸಿಎಎ ಜಾಗೃತಿ ಸಮಾವೇಶದಲ್ಲಿ ರೇಣುಕಾಚಾರ್ಯರು ‘ಮಸೀದಿಗಳಲ್ಲಿ ಪ್ರಾರ್ಥನೆಯ ಬದಲು ಶಸ್ತ್ರಾಸ್ತ್ರ ಸಂಗ್ರಹ ಮಾಡಿದ್ದಾರೆ, ಇದಕ್ಕಾಗಿ ಮಸೀದಿಗಳು ಬೇಕಿತ್ತಾ ? ಮುಸ್ಲಿಂರನ್ನು ಎಲ್ಲಿಡಬೇಕೋ, ಅಲ್ಲಿಡಬೇಕು, ಅವರ ಬೆಂಬಲ ನನಗೆ ಬೇಡ’ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿದ್ದಾರೆ. ಇದರಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡ ನನ್ನಂತಹ ಸಾವಿರಾರು ಮುಸ್ಲಿಂ ಕಾರ್ಯಕರ್ತರಿಗೆ ಅಪಾರವಾದ ನೋವುಂಟಾಗಿದೆ. ಆದುದರಿಂದ ಸಾರ್ವಜನಿಕವಾಗಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನೀಡಿರುವ ಹೇಳಿಕೆಯು ಪಕ್ಷ ವಿರೋಧಿ ಹೇಳಿಕೆಯಾಗಿರುತ್ತದೆ. ಈ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸುವಂತೆ ಮತ್ತು ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ರಹೀಂ ಉಚ್ಚಿಲ್ ಒತ್ತಾಯಿಸಿದ್ದಾರೆ.