ಬ್ರಹ್ಮಾವರ: ಸಿಹಿ ನೀರು, ಉತ್ಪಾದನಾ ತರಬೇತಿ
ಉಡುಪಿ, ಜ.23: ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಹಿ ನೀರು ಮುತ್ತು ಉತ್ಪಾದನಾ ತರಬೇತಿ ಕಾರ್ಯಕ್ರಮ ಮಂಗಳವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತೀರ್ಥಹಳ್ಳಿ ಸುಮಂತ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ, ರೈತರಿಗೆ ಸಿಹಿನೀರು ಮುತ್ತು ಉತ್ಪಾದನೆಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
ಕೆವಿಕೆ ಬ್ರಹ್ಮಾವರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಬಿ. ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುತ್ತು ಕೃಷಿಯನ್ನು ಉಪಕಸುಬಾಗಿ ಕೈಗೊಳ್ಳುವಂತೆ ರೈತರಿಗೆ ಕಿವಿಮಾತು ಹೇಳಿದರು. ಅಣಬೆ ಕೃಷಿ ಮತ್ತು ಜೇನು ಕೃಷಿ ಮಾಡಿ ಯಶಸ್ವಿಯಾಗಿರುವ ರೆತರ ಸಾಧನೆಯ ಬಗ್ಗೆ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ನಿಕಲ್ರನ್ನು ಗೌರವಿಸಲಾಯಿತು. ಈತ ತನ್ನ 13ನೇ ವಯಸ್ಸಿನಲ್ಲಿ ಮುರುವಾಯಿ (ಶೆಲ್) ಕುರಿತು ಅಧ್ಯಯನ ಮಾಡಿ ‘ಮುರುವಾಯಿ ನೆಲೆ ಬೆಲೆ’ ಎನ್ನುವ ಪುಸ್ತಕ ಬರೆದಿದ್ದಾನೆ.
ಮೀನುಗಾರಿಕೆ ವಿಜ್ಞಾನಿ ಶ್ರೀನಿವಾಸ್ ಎಚ್. ಹುಲಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಎನ್. ಈ. ನವೀನ್ ನಿರೂಪಿಸಿ ವಂದಿಸಿದರು.