ಎಸ್ಡಿಪಿಐ ವಿರುದ್ಧ ಆಧಾರ ರಹಿತ ಆರೋಪ: ರಂಜಿತ್ ಹೆಂಗವಲ್ಲಿ ವಿರುದ್ದ ದೂರು
ಉಡುಪಿ, ಜ.24: ಸಾಮಾಜಿಕ ಜಾಲತಾಣದಲ್ಲಿ ಎಸ್ಡಿಪಿಐ ಬಗ್ಗೆ ಆಧಾರ ರಹಿತ ಆರೋಪ ಮಾಡಿ ಸಮಾಜದಲ್ಲಿ ಗಲಭೆಗೆ ಪ್ರಚೋದಿಸುತ್ತಿರುವ ಹೆಬ್ರಿ ಮೂಲದ ರಂಜಿತ್ ಎಸ್.ಹೆಂಗವಲ್ಲಿ ವಿರುದ್ದ ಎಸ್ಡಿಪಿಐ ಉಡುಪಿ ಜಿಲ್ಲಾ ಸಮಿತಿ ಜ.23ರಂದು ಉಡುಪಿ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ವಸ್ತು ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಆದಿತ್ಯ ರಾವ್ಗೆ ಬಾಂಬ್ ತರಿಯಾರಿಸಲು ಎಸ್ಡಿಪಿಐ ತರಬೇತಿ ನೀಡಿದೆ. ಎಸ್ಡಿಪಿಐ ಹಿಂದು ಧರ್ಮದ ನಾಯಕರುಗಳ ಕೊಲೆಗೆ ಸಂಚು ರೂಪಿಸುತ್ತಿದೆ ಎಂಬ ನಿರಾಧಾರವಾದ ಪೋಸ್ಟರ್ ಗಳನ್ನು ಈತ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆದಿತ್ಯ ರಾವ್ಗೆ ಪರೋಕ್ಷವಾಗಿ ಬೆಂಬಲ ಸೂಚಿಸಿ ಸಮಾಜದ ಶಾಂತಿ ಕೆದಡುವ ಕೆಲಸ ಮಾಡುತ್ತಿದ್ದಾನೆ. ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ್, ಜಿಲ್ಲಾ ಸಮಿತಿ ಸದಸ್ಯ ಅಬ್ದುರ್ರಹ್ಮಾನ್ ಮಲ್ಪೆ, ಕಾರ್ಯದರ್ಶಿ ಇಲ್ಯಾಸ್ ಸಾಸ್ತಾನ ಮೊದಲಾದವರು ಉಪಸ್ಥಿತರಿದ್ದರು.