ಬಬ್ಬುಕಟ್ಟೆ: ಬಸ್ಸಿಗೆ ಟ್ರಕ್ ಢಿಕ್ಕಿ; ಮೂವರು ವಿದ್ಯಾರ್ಥಿಗಳಿಗೆ ಗಾಯ
ಮಂಗಳೂರು, ಜ.25: ಟ್ರಕ್ವೊಂದು ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆ ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಅಪಘಾತದಲ್ಲಿ ಓರ್ವ ವಿದ್ಯಾರ್ಥಿಯ ಕಾಲು ಮುರಿತಕ್ಕೊಳಗಾಗಿದೆ. ಗಾಯಾಳುಗಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ಬಸ್ಸಿನ ಹಿಂಬದಿಗೆ ಟ್ರಕ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಸ್ಸಿನ ಹಿಂಭಾಗ ಜಖಂಗೊಂಡಿದೆ.
ಅಪಘಾತದ ಹಿನ್ನೆಲೆಯಲ್ಲಿ ಬಬ್ಬುಕಟ್ಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ದೇರಳಕಟ್ಟೆಯಿಂದ ಮಂಗಳೂರಿಗೆ ಬರುವ ಬಸ್ ಸಹಿತ ಎಲ್ಲ ವಾಹನಗಳು ಮಾಡೂರು-ಕೋಟೆಕಾರ್ ಮಾರ್ಗವಾಗಿ ಸಂಚರಿಸುತ್ತಿವೆ. ಅದಲ್ಲದೆ ಮಂಗಳೂರಿನಿಂದ ಹೊರಟ ಕೆಲವು ವಾಹನಗಳು ಕಲ್ಲಾಪು-ಕುದ್ರು ಆಗಿ ಕುತ್ತಾರ್-ದೇರಳಕಟ್ಟೆಯತ್ತ ಚಲಿಸುತ್ತಿವೆ.