ನಾಗಪ್ಪ ಶೆಟ್ಟಿಗಾರ್ಗೆ ‘ಉತ್ತಮ ನೇಕಾರ’ ಪ್ರಶಸ್ತಿ
ಕಿನ್ನಿಗೋಳಿ, ಜ.25: ಕೈಮಗ್ಗದ ನೇಕಾರಿಕೆಗೆ ಪ್ರೋತ್ಸಾಹ ನೀಡುವ ಹಾಗೂ ಉಡುಪಿ ಸೀರೆ ಉಳಿಸಿ ಅಭಿಯಾನದ ಅಂಗವಾಗಿ ಕಾರ್ಕಳದ ಕದಿಕೆ ಟ್ರಸ್ಟ್, ಕಿನ್ನಿಗೋಳಿಯ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ನೀಡುತ್ತಿರುವ ‘ಉತ್ತಮ ನೇಕಾರ’ ಪ್ರಶಸ್ತಿಯನ್ನು ಈ ಸಾಲಿಗೆ ಕೆಂಚನಕೆರೆಯ ಹಿರಿಯ ನೇಕಾರರಾದ ನಾಗಪ್ಪ ಶೆಟ್ಟಿಗಾರ್ (56) ಅವರಿಗೆ ಪ್ರದಾನ ಮಾಡಲಾಯಿತು.
ಕಿನ್ನಿಗೋಳಿಯ ನೇಕಾರ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗಪ್ಪ ಶೆಟ್ಟಿಗಾರ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಳೆದ ನಾಲ್ಕು ದಶಕಗಳಿಂದ ನೇಕಾರಿಕೆ ಕೆಲಸ ಮಾಡುತ್ತಿರುವ ನಾಗಪ್ಪ ಶೆಟ್ಟಿಗಾರ್ ಇವರು ಇತ್ತೀಚೆಗೆ ಸೀರೆಗಳಿಗೆ ಬುಟ್ಟಾ ಹಾಕುವ ಕೆಲಸವನ್ನು ಕಲಿತು ಅದರಲ್ಲಿಯೂ ಪರಿಣತಿ ಸಾಧಿಸಿದ್ದಾರೆ.
ಇದೇ ಸಂದರ್ಭದಲ್ಲಿ ನೇಕಾರಿಕೆಯ ಪೂರ್ವ ತಯಾರಿಯೂ ಸೇರಿದಂತೆ ಈ ಕ್ಷೇತ್ರದ ಎಲ್ಲಾ ಕೆಲಸಗಳಲ್ಲಿಯೂ ಪರಿಣತಿ ಹೊಂದಿರುವ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್ ಅವರನ್ನು ಸಹ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರಿನ ಆಪ್ತ ಸಮಾಲೋಚಕ ಪ್ರಕಾಶ್, ಲೇಖಕಿ ಮತ್ತು ನಗರ ಕೈತೋಟ ಪ್ರೇರಕಿ ಸರೋಜ, ಬಿಎಸ್ಸೆಎನ್ನೆಲ್ನ ಅಭಿಯಂತರ ಭವಾನಿ ಶಂಕರ್ ಕಾಟಿಪಳ್ಳ, ಉದ್ಯಮಿ ಗೋಪಾಲ ಶೆಟ್ಟಿಗಾರ್, ಕೃಷಿಕ ಸಚಿನ್ ಸಾಣೂರ್, ತಾಳಿಪಾಡಿ ಪ್ರಾಥಮಿಕ ನೇಕಾರರ ಸಂಘದ ಆಡಳಿತ ನಿರ್ದೇಶಕ ಮಾಧವ ಶೆಟ್ಟಿಗಾರ್, ಕದಿಕೆ ಟ್ರಸ್ಟಿನ ಅಧ್ಯಕ್ಷೆ ಮಮತಾ ರೈ, ಕಾರ್ಯದರ್ಶಿ ಚಿಕ್ಕಪ್ಪಶೆಟ್ಟಿ, ಕಿನ್ನಿಗೋಳಿಯ ಹಿರಿಯ ನೇಕಾರರು, ನೇಕಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪರಿಚಯ: ತಮ್ಮ ಹದಿನಾರನೆಯ ವಯಸ್ಸಿನಲ್ಲಿ ನೇಕಾರಿಕೆ ಆರಂಭಿಸಿದ ನಾಗಪ್ಪಶೆಟ್ಟಿಗಾರ್, ಅಲ್ಲಿಂದ ನಿರಂತರವಾಗಿ ನೇಕಾರಿಕೆ ಮಾಡುತ್ತಾ ಬಂದಿದ್ದಾರೆ. 60 ನಂಬರಿನ ಸುಂದರ ತಿಳಿಬಣ್ಣಗಳ ಸೀರೆಗಳನ್ನು ನೇಯುವ ನಾಗಪ್ಪ, ಇತ್ತೀಚೆಗೆ ಕದಿಕೆ ಟ್ರಸ್ಟಿನ ಪ್ರೋತ್ಸಾಹದ ಮೇರೆಗೆ ಬುಟ್ಟಾ ಇರುವ ಸೀರೆಗಳನ್ನು ನೇಯಲು ಆರಂಭಿಸಿದ್ದಾರೆ.
ತಮ್ಮ ಹದಿನಾರನೆಯ ವಯಸ್ಸಿನಲ್ಲಿ ನೇಕಾರಿಕೆ ಆರಂಭಿಸಿದ ನಾಗಪ್ಪಶೆಟ್ಟಿಗಾರ್, ಅಲ್ಲಿಂದ ನಿರಂತರವಾಗಿ ನೇಕಾರಿಕೆ ಮಾಡುತ್ತಾ ಬಂದಿದ್ದಾರೆ. 60 ನಂಬರಿನ ಸುಂದರ ತಿಳಿಬಣ್ಣಗಳ ಸೀರೆಗಳನ್ನು ನೇಯುವ ನಾಗಪ್ಪ, ಇತ್ತೀಚೆಗೆ ಕದಿಕೆ ಟ್ರಸ್ಟಿನ ಪ್ರೋತ್ಸಾಹದ ಮೇರೆಗೆ ಬುಟ್ಟಾ ಇರುವ ಸೀರೆಗಳನ್ನು ನೇಯಲು ಆರಂಭಿಸಿದ್ದಾರೆ. ಹೊಸ ಪ್ರಯೋಗಗಳಿಗೆ ತೆರೆದ ಮನಸ್ಸು ಇವರದ್ದು. ತಮ್ಮ ಇಬ್ಬರು ಪುತ್ರಿಯವರಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿದ್ದಾರೆ. ಎಲ್ಲಾ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಉಡುಪಿ ಸೀರೆ ನೇಕಾರಿಕೆಯನ್ನು ಉಳಿಸ ಬೆಳೆಸಲು ಇವರು ಶ್ರಮಿಸುತಿದ್ದಾರೆ.