ಕೆಎಂಸಿ ಮಣಿಪಾಲ ತಂಡಕ್ಕೆ ಮೆಡಿಕ್ವಿಜ್-2020 ಪ್ರಶಸ್ತಿ
ಮಂಗಳೂರು, ಜ.25: ನಗರದ ಎ.ಜೆ. ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಿರಂತರ ವೈದ್ಯಕೀಯ ಶಿಕ್ಷಣದ ಅಭಿಯಾನದ ಅಂಗವಾಗಿ ವೈದ್ಯಕೀಯ ಶಾಸ್ತ್ರ ವಿಭಾಗದ ಸ್ನಾತಕೋತರ ವಿದ್ಯಾರ್ಥಿಗಳಿಗಾಗಿ ವೈದ್ಯಕೀಯ ಶಾಸ್ತ್ರದ ಬಗ್ಗೆ ಜಿಲ್ಲಾ ಮಟ್ಟದ ದಿ.ಡಾ.ವಿಶ್ವನಾಥ ಸ್ಮಾರಕ ಮೆಡಿಕ್ವಿಜ್ ರಸ ಪ್ರಶ್ನಾ ಸ್ಪರ್ಧೆಯು ಶನಿವಾರ ಏರ್ಪಡಿಸಲಾಯಿತು.
ಈ ಸ್ಪರ್ಧಾ ಕೂಟದಲ್ಲಿ ಕೆಎಂಸಿ ಮಣಿಪಾಲ ತಂಡವನ್ನು ಪ್ರತಿನಿಧಿಸಿದ ಡಾ. ನವನೀತ್ ಕಾಮತ್ ಮತ್ತು ಡಾ. ಪ್ರಗದೀಶ್ ಜೋಡಿ ತಂಡವು ಪ್ರಥಮ ಸ್ಥಾನ ಪಡೆಯಿತು. ನಗರದ ಕೆಎಂಸಿ ಮಂಗಳೂರು ತಂಡವನ್ನು ಪ್ರತಿನಿಧಿಸಿದ ಡಾ. ವಿಕಾಸ್ ಪ್ರಭು ಮತ್ತು ಡಾ. ಪ್ರೀತಿ ಜೋಡಿ ತಂಡವು ದ್ವಿತೀಯ ಸ್ಥಾನ ಪಡೆಯಿತು.
ಎ.ಜೆ. ವೈದ್ಯಕೀಯ ಶಿಕ್ಷಣ ಕಾಲೇಜಿನ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ, ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನು ವಿತರಿಸಿದರು.
ಅತಿಥಿಯಾಗಿ ಎ.ಜೆ. ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಶೋಕ್ ಹೆಗ್ಡೆ, ಎ.ಜೆ. ವೈದ್ಯಕೀಯ ಶಿಕ್ಷಣ ಕಾಲೇಜಿನ ವೈದ್ಯಕೀಯ ಶಾಸ್ತ್ರದ ವಿಭಾಗೀಯ ಮುಖ್ಯಸ್ಥ ಡಾ. ಇ. ವಿ. ಎಸ್. ಮೆಬನ್, ಪ್ರಾಧ್ಯಾಪಕ ಡಾ. ಪ್ರಭಾಕರ್ ರಾವ್ ಪಾಲ್ಗೊಂಡಿದ್ದರು. ಸ್ಪರ್ಧಾಕೂಟದ ಪ್ರಾಯೋಜಕ ಕೀಲು ಮೂಳೆ ತಜ್ಞ ಡಾ. ಧೀರಜ್ ವಿಶ್ವನಾಥ್ ಉಪಸ್ಥಿತರಿದ್ದರು.
ಡಾ.ಸಿದ್ಧಾರ್ಥ ಶೆಣೈ ಸ್ವಾಗತಿಸಿದರು. ಡಾ. ಶ್ರೀವಿದ್ಯಾ ವಂದಿಸಿದರು. ಡಾ. ಅಪೂರ್ವ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಡಾ. ದೇವದಾಸ್ ರೈ ಸ್ಪರ್ಧಾ ಕೂಟವನ್ನು ನಿರೂಪಿಸಿದ್ದರು.ಡಾ.ಪ್ರಶಾಂತ್ ಸ್ಪರ್ಧಾಕೂಟವನ್ನು ಸಂಘಟಿಸಿದ್ದರು.