ಮಂಗಳೂರು : ಜಲೀಲ್, ನೌಶೀನ್ ಗೋಲಿಬಾರ್ ಗೆ ಬಲಿಯಾದ ಸ್ಥಳದಲ್ಲಿ ಗಣರಾಜ್ಯೋತ್ಸವ
ಜಲೀಲ್ ಪುತ್ರಿಯಿಂದ ಧ್ವಜಾರೋಹಣ
ಮಂಗಳೂರು : ಜಲೀಲ್, ನೌಶೀನ್ ಗೋಲಿಬಾರ್ ಗೆ ಬಲಿಯಾದ ಅಝೀಝುದ್ದೀನ್ ರಸ್ತೆ ಬಂದರ್ ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಜಲೀಲ್ ಅವರ ಪುತ್ರಿ ಶಿಫಾನಿ ಜಲೀಲ್ ಹಾಗೂ ಪುತ್ರ ಝಮೀಲ್ ಧ್ವಜಾರೋಹಣ ಮಾಡಿದರು.
ಶಿಫಾನಿ ಜಲೀಲ್ ಸಂವಿಧಾನ ಪೀಠಿಕೆಯನ್ನು ಓದಿಸಿದರು. ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ಮಾತನಾಡಿ, ಇದು ಸಂವಿಧಾನದ ಹತ್ಯೆಯಾದ ಸ್ಥಳವಾಗಿದೆ. ಸಂವಿಧಾನವು ಹಲವು ರಾಜ್ಯಗಳಲ್ಲಿ ಪ್ರತಿದಿನವು ಹತ್ಯೆಯಾಗುತ್ತಿದೆ. ಪ್ರತಿನಿತ್ಯವೂ ನಾವು ಸಂವಿಧಾನವನ್ನು ಮರಳಿ ಪಡೆಯಬೇಕು, ನಿತ್ಯ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭ ಗೋಲಿಬಾರಿಗೆ ಹತ್ಯೆಯಾದ ಜಲೀಲ್ ಹಾಗೂ ನೌಶೀನ್ ಅವರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸಬೇಕು. ಸರಕಾರ ಹಿಂಪಡೆದ ಪರಿಹಾರ ಮೊತ್ತವನ್ನು ಮೃತರ ಕುಟುಂಬಕ್ಕೆ ನೀಡುವಂತೆ ಮತ್ತು ಒಟ್ಟು ಗಲಭೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಎಂದು ಅವರು ಈ ಸಂದರ್ಭ ಒತ್ತಾಯಿಸಿದರು.
ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಹಾಗೂ ನಿವೃತ್ತ ಶಿಕ್ಷಕಿ ಗುಲೋಲಿ, ಡಿವೈಎಫ್ಐ ಜಿಲ್ಲಾಧ್ಯಕ್ಷರ ಇಮ್ತಿಯಾಝ್ ಬಿ.ಕೆ., ಎಸ್ ಐ ಒ ಸದಸ್ಯ ತಲ್ಹ ಇಸ್ಮಾಯಿಲ್, ಅನುಪಮಾ ಮಹಿಳಾ ಮಾಸಿಕ ಸಂಪಾದಕಿ ಶಹನಾಝ್ ಎಮ್ ಈ ಸಂದರ್ಭ ಮಾತನಾಡಿದರು.
ನ್ಯಾಷನಲ್ ವುಮೆನ್ಸ್ ಫ್ರೆಂಟ್ ರಾಜ್ಯಾಧ್ಯಕ್ಷೆ ಶಹೀದಾ ಅಸ್ಲಮ್, ಉಮೈರ ಬಾನು, ಸಮಾಜಿಕ ಕಾರ್ಯಕರ್ತ ಶಬೀರ್ ಅಹ್ಮದ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.