ಭಾರತ ಭೂಪಟವಲ್ಲ ಎಲ್ಲವನ್ನೂ ಒಳಗೊಂಡ ಭೌಗೋಳಿಕ ಸಂಕೇತ -ಡಾ. ಯತೀಶ್ ಉಳ್ಳಾಲ್
ಪುತ್ತೂರು ತಾಲೂಕು ಗಣರಾಜ್ಯೋತ್ಸವ ದಿನಾಚರಣೆ
ಪುತ್ತೂರು: ಭಾರತವೆಂದರೆ ಕೇವಲ ಒಂದು ಭೂಪಟವಲ್ಲ. ಇದು ಮನುಷ್ಯರು, ಪ್ರಾಣಿ, ಪಕ್ಷಿ ಸಂಕುಲ ಪೃಕೃತಿಯನ್ನು ಒಳಗೊಂಡ ಭೌಗೋಳಿಕ ಸಂಕೇತ. ರಾಷ್ಟ್ರ ಪ್ರಜ್ಞೆಯ ಪ್ರತೀಕವಾಗಿರುವ ಭಾರತದಲ್ಲಿರುವ ಎಲ್ಲರೂ ಒಂದೇ ಎಂಬ ಭಾವನೆ ಗಟ್ಟಿಗೊಳಿಸಲು ಗಣರಾಜ್ಯೋತ್ಸವ ಸುಂದರ ಅವಕಾಶವಾಗಿದೆ ಎಂದು ಪುತ್ತೂರು ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಹೇಳಿದರು.
ಅವರು ನಗರದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ ಸಂದೇಶ ನೀಡಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಪುತ್ತೂರು ಉಪವಿಭಾಗದ ಡಿವೈಎಸ್ಪಿ ದಿವಾಕರ ಶೆಟ್ಟಿ, ಪುತ್ತೂರು ನಗರ ಸಭಾ ಪೌರಾಯುಕ್ತೆ ರೂಪಾ ಟಿ ಶೆಟ್ಟಿ, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಮತ್ತು ತಹಶೀಲ್ದಾರ್ ರಾಹುಲ್ ಶಿಂದೆ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಮೊದಲು ಕ್ರೀಡಾಂಗಣದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಹಾಂತೇಶ್ ನಾಯಕ್ ನೇತೃತ್ವದಲ್ಲಿ ಆಕರ್ಷಕ ಪಥ ಸಂಚನಲ ನಡೆಯಿತು. ಪುತ್ತೂರು ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಪಂಥ ಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಪಥ ಸಂಚಲನದಲ್ಲಿ ಪೊಲೀಸ್, ಗೃಹ ರಕ್ಷಕ ದಳ, ಎನ್ಸಿಸಿ ಕ್ಯಾಡೆಟ್ಗಳು, ಸ್ಪೂಡೆಂಟ್ ಪೊಲೀಸ್ ಕೆಡೆಟ್ಗಳು, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು, ಭಾರತ ಸೇವಾದಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಯಿತು. ಪಥ ಸಂಚಲನದಲ್ಲಿ ಪಾಲ್ಗೊಂಡ ತಂಡಗಳನ್ನು ಗೌರವಿಸಲಾಯಿತು.
ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.