ಹುಸಿಬಾಂಬ್ ಬೆದರಿಕೆ ಕರೆ ಪ್ರಕರಣ: ಸೈಬರ್ ಪೊಲೀಸ್ ವಶಕ್ಕೆ ಶಂಕಿತ ಉಗ್ರ ಆದಿತ್ಯ ರಾವ್
ಸ್ಫೋಟಕ ಪ್ರಕರಣದ ಮಹಜರು ತಾತ್ಕಾಲಿಕ ಸ್ಥಗಿತ
ಮಂಗಳೂರು, ಜ.26: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿ ಪೊಲೀಸ್ ಕಸ್ಟಡಿಯಲ್ಲಿರುವ ಶಂಕಿತ ಉಗ್ರ ಆದಿತ್ಯ ರಾವ್ ಹುಸಿ ಬಾಂಬ್ ಕರೆ ಕೃತ್ಯದ ಬಗ್ಗೆ ಮಂಗಳೂರು ಸೈಬರ್ ಪೊಲೀಸರು ರವಿವಾರ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರವಿವಾರ ಆದಿತ್ಯ ರಾವ್ನ್ನು ಮಹಜರಿಗೆ ಕರೆದುಕೊಂಡು ಹೋಗಿಲ್ಲ.
ಮಂಗಳೂರು ನಗರದ ಬಲ್ಮಠದ ಹೊಟೇಲ್ನಲ್ಲಿ ಕೆಲಸಕ್ಕೆ ಇದ್ದ ಸಂದರ್ಭ ಆದಿತ್ಯ ರಾವ್ ಕಂಪ್ಯೂಟರ್ ಬಳಸಿ ಆನ್ಲೈನ್ನಲ್ಲಿ ಸ್ಫೋಟಕ ತಯಾರಿಕೆ ಬಗ್ಗೆ ಜಾಲಾಡಿದ್ದ. ಅಲ್ಲದೆ, ಆನ್ಲೈನ್ ಮೂಲಕ ಸ್ಫೋಟಕ ಸಾಮಗ್ರಿಗಳನ್ನು ಬಿಡಿಬಿಡಿಯಾಗಿ ಚೆನ್ನೈನಿಂದ ಖರೀದಿಸಿದ್ದ. ಇದಕ್ಕಾಗಿ ಕಳುಹಿಸಿದ ಇ-ಮೇಲ್ಗಳ ಕುರಿತು ಸೈಬರ್ ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ.
ಸ್ವತಃ ಆದಿತ್ಯ ರಾವ್ನನ್ನು ಕುಳ್ಳಿರಿಸಿಕೊಂಡು ಇದುವರೆಗೆ ಆತನಿಂದ ಇ-ಮೇಲ್ ಹಾಗೂ ಆನ್ಲೈನ್ ವಹಿವಾಟಿನ ಬಗ್ಗೆ ಸಮಗ್ರ ವಿವರ ಸಂಗ್ರಹಿಸಿ ವಿಶ್ಲೇಷಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಇದೇ ಸಂದರ್ಭ ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಫೋಟಕ ಇರಿಸಿ ಪರಾರಿಯಾದ ಬಳಿಕ ಮಲ್ಪೆಯಿಂದ ಇಂಡಿಗೋ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಹಾಕಿದ್ದನು. ಬಳಿಕ ಬೆದರಿಕೆ ಹಾಕಲು ಬಳಸಿದ ಮೊಬೈಲ್ ಸಿಮ್ನ್ನು ಬಿಸಾಡಿದ್ದನು. ಈ ಬೆದರಿಕೆ ಕರೆಯ ಬಗ್ಗೆಯೂ ಸೈಬರ್ ಪೊಲೀಸರು ಆತನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈತನ ಇಂಟರ್ನೆಟ್ ವ್ಯವಹಾರ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.