ಎಸ್ಡಿಪಿಐ ಕೈಕಂಬ ವಲಯ ಸಮಿತಿಯಿಂದ ಗಣರಾಜ್ಯೋತ್ಸವ
ಮಂಗಳೂರು, ಜ.26: ಎಸ್ಡಿಪಿಐ ಕೈಕಂಬ ವಲಯ ಸಮಿತಿಯಿಂದ ‘ಗಣರಾಜ್ಯವನ್ನು ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ದೇಶದ 71ನೇ ಗಣರಾಜ್ಯೋತ್ಸವವನ್ನು ಕೈಕಂಬ ಜಂಕ್ಷನ್ನಲ್ಲಿ ರವಿವಾರ ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾದ ಮೌಲಾನ ಶಾಫಿ ಮದನಿ ಕರಾಯ, ಮೌಲಾನ ಮುಹಮ್ಮದ್ ಇಸ್ಮಾಯೀಲ್ ಹಾಗೂ ಪಿಎಫ್ಐ ವಿಭಾಗ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಧ್ವಜಾರೋಹಣ ನೆರವೇರಿಸಿದರು.
ಎಸ್.ಎಸ್.ವಿ. ಪ್ರಧಾನ ಕಾರ್ಯದರ್ಶಿ ಮೌಲಾನ ಕೆ.ಎಚ್.ಯು. ಶಾಫಿ ಮದನಿ ಕರಾಯ ಮಾತನಾಡಿ, ಸಂವಿಧಾನವನ್ನು ಸಂರಕ್ಷಿಸುವ ಮೂಲಕ ಪವಿತ್ರ ಭಾರತದ ಸಾರ್ವಭೌಮತ್ವವನ್ನು ಭಾರತೀಯರಾದ ನಾವೆಲ್ಲ ಎತ್ತಿಹಿಡಿಯಬೇಕು. ಈ ಮೂಲಕ ಸಂವಿಧಾನ ವಿರೋಧಿ ಕಾಯ್ದೆಗಳಾದ ಎನ್ಆರ್ಸಿ, ಸಿಎಎ, ಎನ್ಪಿಆರ್ ಬಹಿಷ್ಕರಿಸೋಣ ಎಂದು ಹೇಳಿದರು.
ಮೌಲಾನ ಮುಹಮ್ಮದ್ ಇಸ್ಮಾಯೀಲ್, ಪಿಎಫ್ಐ ಬಜ್ಪೆ ವಿಭಾಗದ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಮಾತನಾಡಿದರು.
ಸಿಎಫ್ಐ ಜಿಲ್ಲಾ ಕಾರ್ಯದರ್ಶಿ ಫಾರಿಶ್ ಸೂರಲ್ಪಾಡಿ ಸಂವಿಧಾನದ ಪೀಠಿಕೆಯನ್ನು ಓದಿಸಿದರು.
ಕಾರ್ಯಕ್ರಮದಲ್ಲಿ ಎಸ್ಡಿಪಿಐ ವಲಯಾಧ್ಯಕ್ಷ ಖಾದರ್ ಗಂಜಿಮಠ, ಗುರುಪುರ ಗ್ರಾಪಂ ಸದಸ್ಯ ಅಹ್ಮದ್ ಬಾವ ತೋಕೂರು, ಸಾದಿಕ್ ಗಾಂಧಿನಗರ ಹಾಗೂ ಎಸ್ಡಿಪಿಐ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು. ಫಾರಿಶ್ ಸೂರಲ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.