ಉಪ್ಪಿನಂಗಡಿ: ಎಸ್ಡಿಪಿಐಯಿಂದ ಗಣರಾಜ್ಯೋತ್ಸವ
ಉಪ್ಪಿನಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಪ್ಪಿನಂಗಡಿ ವಲಯದ ವತಿಯಿಂದ 'ಗಣರಾಜ್ಯವನ್ನು ಉಳಿಸಿ' ಧ್ಯೇಯ ವಾಕ್ಯದೊಂದಿಗೆ ಗಣರಾಜೋತ್ಸವದ ಧ್ವಜಾರೋಹಣ ನೆರವೇರಿಸಲಾಯಿತು.
ಇಲ್ಲಿನ ದಾರು ತೌಹೀದ್ ಮಸೀದಿ ಮುಂಭಾಗದ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಡಿಪಿಐ ಉಪ್ಪಿನಂಗಡಿ ವಲಯಾಧ್ಯಕ್ಷ ಅಬ್ದುಲ್ ರಝಾಕ್ ಸೀಮಾ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕೇಂದ್ರ ಸರಕಾರದ ನೀತಿಯಿಂದಾಗಿ ಭಾರತದ ಭಾವೈಕ್ಯತೆಗೆ ಧಕ್ಕೆ ಉಂಟಾಗುತ್ತಿದ್ದು, ಈಗ ಜಾರಿಗೊಳಿಸಿರುವ ಎನ್ ಆರ್ಸಿ , ಸಿಎಎ ಹಾಗೂ ಎನ್ಪಿಆರ್ ಕಾಯ್ದೆಗಳು ಸಂವಿಧಾನ ವಿರೋಧಿ ಕಾಯ್ದೆಗಳಾಗಿದ್ದು, ಇವುಗಳನ್ನು ಜಾರಿಗೆ ತರುವ ಮೂಲಕ ಸಮಾಜದಲ್ಲಿ ಕೋಮುವಾದದ ವಿಷ ಬೀಜವನ್ನು ಬಿತ್ತಲಾಗುತ್ತಿದೆ. ಇದನ್ನು ತಡೆಗಟ್ಟಲು ನಾವು ಅಂಬೇಡ್ಕರ್ ರವರ ಸಂವಿಧಾನವನ್ನು ಎತ್ತಿ ಹಿಡಿಯಬೇಕಾಗಿದೆ. ಒಂದೇ ರಾಷ್ಟ್ರ, ಒಂದೇ ಸಂವಿಧಾನ ಎಂಬ ಆಶಯವನ್ನು ಇಟ್ಟು ಭವ್ಯ ಭಾರತವನ್ನು ಕಟ್ಟಲು ಎಲ್ಲಾ ಭಾರತದ ಪ್ರಜ್ಞಾವಂತ ನಾಗರಿಕರೂ ಒಂದುಗೂಡಿ ಪ್ಯಾಶಿಸ್ಟ್ ಶಕ್ತಿಯನ್ನು ನಿರ್ಣಾಮ ಮಾಡಲು ಪ್ರಯತ್ನಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪಿಎಫ್ಐ ರಾಜ್ಯ ಸಮಿತಿ ಸದಸ್ಯ ಅಯ್ಯೂಬ್ ಅಗ್ನಾಡಿ, ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಸದಸ್ಯ ಅಬ್ದುಲ್ ಹಮೀದ್ ಸಾಲ್ಮರ, ಪಿಎಫ್ಐ ಉಪ್ಪಿನಂಗಡಿ ವಲಯಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ಎಸ್ಡಿಪಿಐ ಉಪ್ಪಿನಂಗಡಿ ವಲಯದ ಕಾರ್ಯದರ್ಶಿ ಅಬ್ದುಲ್ಲಾ ಆದರ್ಶನಗರ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಎನ್ಆರ್ಸಿ, ಸಿಎಎ ಹಾಗೂ ಎನ್ಪಿಆರ್ ಕಾಯ್ದೆಗಳ ವಿರುದ್ಧ ಎಸ್ಡಿಪಿಐ ನಡೆಸುತ್ತಿರುವ ದಾಖಲೆಗಳನ್ನು ನಾವು ತೋರಿಸುವುದಿಲ್ಲ ಎಂಬ ಅಭಿಯಾನದ ಕರಪತ್ರವನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಲಾಯಿತು.
ಪಿಎಫ್ಐ ಉಪ್ಪಿನಂಗಡಿ ವಲಯ ಸಮಿತಿ ಸದಸ್ಯ ಝಕಾರಿಯಾ ಕೊಡಿಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಕೋಶಾಧಿಕಾರಿ ಇಕ್ಬಾಲ್ ಕೆಂಪಿ ವಂದಿಸಿದರು.