ಮಲ್ಪೆ: ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಪರಿಹಾರ ನೀಡಲು ರಕ್ಷಣಾ ಸಚಿವರಿಗೆ ಮನವಿ
ಮಂಗಳೂರು, ಜ.27: ವರ್ಷದ ಹಿಂದೆ ಮೀನುಗಾರಿಕೆಗೆಂದು ಆಳಸಮುದ್ರಕ್ಕೆ ಮಲ್ಪೆಯಿಂದ ತೆರಳಿದ್ದ ವೇಳೆ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ ಮೀನುಗಾರರ ಕುಟುಂಬಕ್ಕೆ ಹೆಚ್ಚಿನ ಮೊತ್ತದ ಪರಿಹಾರವನ್ನು ಕೇಂದ್ರ ಸರಕಾರ ಒದಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಇವರ ನೇತೃತ್ವದಲ್ಲಿ ಉಡುಪಿ ಶಾಸಕ ಕೆ ರಘುಪತಿ ಭಟ್ ಅವರನ್ನೊಳಗೊಂಡ ಮೀನುಗಾರರ ನಿಯೋಗವು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.
ಮಂಗಳೂರಿನಲ್ಲಿ ನಡೆದ ಸಿಎಎ ಸಮರ್ಥನಾ ಸಮಾವೇಶದ ಸಂದರ್ಭದಲ್ಲಿ ಈ ಬಗ್ಗೆ ಮನವಿ ಮಾಡಲಾಗಿದ್ದು ಈ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮೀನುಗಾರ ಮುಖಂಡರಾದ ಸತೀಶ್ ಕುಂದರ್, ರವಿರಾಜ್ ಸುವರ್ಣ, ಹರೀಶ್ ಕುಂದರ್, ಪಾಂಡುರಂಗ ಕೋಟ್ಯಾನ್, ಗೋಪಾಲ್ ಆರ್.ಕೆ. ಹಾಗೂ ಸಂತ್ರಸ್ತ ಮೀನುಗಾರ ಕುಟುಂಬಿಕರು ಉಪಸ್ಥಿತರಿದ್ದರು.
ಮನವಿಗೆ ಸ್ಪಂದಿಸಿದ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಿಯೋಗಕ್ಕೆ ಭರವಸೆ ನೀಡಿದರು.