ಕಾಟಿಪಳ್ಳ: ರಾಜ್ಯಮಟ್ಟದ ಜನಪದ ಜಾತ್ರೆಗೆ ಚಾಲನೆ
ಸುರತ್ಕಲ್, ಫೆ.9: ನಾಡು ನುಡಿ ಸಂಸ್ಕೃತಿಯೊಂದಿಗೆ ಗ್ರಾಮೀಣ ಜನತೆಯ ಬದುಕಿನ ಜೀವಾಳವಾದ ಜನಪದ ಸಂಸ್ಕೃತಿಯನ್ನು ಉಳಿಸಿ ಪ್ರೋತಾಹಿಸಲು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಜ್ಞಾನ ಭಾರತಿ ಪ್ರಕಾಶನದ ಸಿಇಒ ಪ್ರಕಾಶ್ ಪಿಎಸ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಗಣೇಶಪುರ ಶ್ರೀಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಹಕಾರದಲ್ಲಿ ಕಾಟಿಪಳ್ಳ ಗಣೇಶಪುರ ನವೋದಯ ರಂಗ ಮಂದಿರದಲ್ಲಿ ರವಿವಾರ ನಡೆದ ರಾಜ್ಯ ಮಟ್ಟದ ಜನಪದ ಜಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ಮಾತನಾಡಿ ಭಾರತಿಯ ಸಂಸ್ಕೃತಿಯು ವಿಶ್ವಕ್ಕೆ ಮಾದರಿಯಾಗಿದೆ. ವಿದೇಶಿಯರೂ ಭಾರತಕ್ಕೆ ಬಂದು ಸಂಸ್ಕೃತಿ ಕಲೆಗಳ ಬಗ್ಗೆ ಅಧ್ಯಯನ ಮಾಡಿ ಅದನ್ನು ಜೀವನದ ಭಾಗವಾಗಿ ಅಳವಡಿಸುತ್ತಿರುವುದು ಸುತ್ಯಾರ್ಹ ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಬಿ. ಸ್ವಾಗತಿಸಿದರು. ಗಣೇಶಪುರ ಗಿರೀಶ್ ನಾವಡ ವಂದಿಸಿದರು. ಚಂದ್ರಹಾ ಶೆಟ್ಟಿಗಾರ್ ಮತ್ತು ದೀನನಾಥ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.