ಕೊಣಾಜೆ: ಮದ್ರಸ ವಿದ್ಯಾರ್ಥಿನಿಯರ ಅತ್ಯಾಚಾರ, ಕೊಲೆಗೆ ಯತ್ನ; ಮೂವರು ಆರೋಪಿಗಳು ಸೆರೆ
ಮಂಗಳೂರು, ಫೆ.11: ಕೊಣಾಜೆ ಸಮೀಪದ ಮಲಾರ್ ಉಗ್ಗನಬೈಲ್ ಬಳಿ ಮದ್ರಸಕ್ಕೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಮೂವರು ಆರೋಪಿಗಳನ್ನು ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತರನ್ನು ಪಾವೂರು ಉಗ್ಗನಬೈಲು ಸಮೀಪದ ಗುಣಪಾಲ (25), ಕಿರಣ್ ಕುಮಾರ್ (26), ನೀರುಮಾರ್ಗದ ಸುಭಾಷ್ (29) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಸುಮಾರು 5:30ರ ವೇಳೆಗೆ ಮಲಾರ್ನ ನೂರುಲ್ ಇಸ್ಲಾಮ್ ಮದ್ರಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಮೂವರು ಬಾಲಕಿಯರನ್ನು ನಿರ್ಜನ ಪ್ರದೇಶದಲ್ಲಿ ತಡೆದು ನಿಲ್ಲಿಸಿದ ದುಷ್ಕರ್ಮಿಗಳು ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದರು ಎನ್ನಲಾಗಿದೆ. ಈ ಸಂದರ್ಭ ಅದೇ ದಾರಿಯಾಗಿ ಬರುವ ಇತರರನ್ನು ಕಂಡ ದುಷ್ಕರ್ಮಿಗಳು ಓಡಿ ಪರಾರಿಯಾಗಿದ್ದಾರೆ. ತಕ್ಷಣ ವಿದ್ಯಾರ್ಥಿಗಳು ಸ್ಥಳೀಯರ ಗಮನಕ್ಕೆ ಈ ವಿಷಯ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಗಳವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಫೋಕ್ಸೋ, ಅತ್ಯಾಚಾರಕ್ಕೆ ಯತ್ನ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.