ಪ್ರಾಕೃತಿಕ ಸಮತೋಲನಕ್ಕೆ ಹಾವುಗಳ ಕೊಡುಗೆ ಅಪಾರ: ಸ್ನೇಕ್ ಕಿರಣ್
ಬ್ರಹ್ಮಾವರ, ಫೆ.12: ಮಾನವನ ಸ್ವಾರ್ಥದಿಂದ ಇಂದು ಪ್ರಾಕೃತಿಕ ಅಸಮ ತೋಲನ ಉಂಟಾಗುತ್ತಿದೆ. ಜಗತ್ತಿನ ಹೆಚ್ಚಿನ ಪ್ರಾಕೃತಿಕ ಸಮಸ್ಯೆಗಳಿಗೆ ಇದುವೇ ಪ್ರಮುಖ ಕಾರಣ. ಪ್ರಾಕೃತಿಕ ಸಮತೋಲನಕ್ಕೆ ಹಾವುಗಳು ಮಹತ್ವದ ಕೊಡುಗೆ ನೀಡುತ್ತಿವೆ. ಆದರೆ ಮನುಷ್ಯನ ತಪ್ಪುಕಲ್ಪನೆಯಿಂದ ವಿಷಪೂರಿತ ಹಾವುಗಳಿಗಿಂತ ವಿಷರಹಿತ ಹಾವುಗಳೇ ಸಾಯುತ್ತಿವೆ. ಕರಾವಳಿಯಲ್ಲಿ ಹೆಚ್ಚಿನ ಹಾವಿನ ಪ್ರಭೇದ ಗಳು ಅಳಿವಿನಂಚಿನಲ್ಲಿವೆ ಎಂದು ಉರಗ ತಜ್ಞ ಸ್ನೇಕ್ ಕಿರಣ್ ಮಂಗಳೂರು ಹೇಳಿದ್ದಾರೆ.
ಬ್ರಹ್ಮಾವರ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ವೈಎಸ್ಎಂ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ಹಾವು -ನಾವು ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.
ಹಾವುಗಳ ಜೀವನಕ್ರಮ ಸಂತಾನೋತ್ಪತ್ತಿ, ಬೇಟೆ, ಹಾವಿನ ವಿವಿಧ ತಳಿಗಳು, ವಿಷಪೂರಿತ, ವಿಷವಲ್ಲದ ಹಾವುಗಳ ಕುರಿತು ಅವರು ಪರಿಚಯ ನೀಡಿದರು. ಹಾವು ಕಚ್ಚಿದಾಗ ತಕ್ಷಣ ಮಾಡುವ ಪ್ರಥಮ ಚಿಕಿತ್ಸೆ, ಆಹಾರ ಕ್ರಮದ ಬಗ್ಗೆ ತಿಳಿ ಹೇಳಿದರು. ಹಾವುಗಳ ಬಗ್ಗೆ ಇರುವ ಅನೇಕ ಮೂಢನಂಬಿಕೆಗಳನ್ನು ಬಿಡಿಸಿ ಅವುಗಳ ವೈಜ್ಞಾನಿಕ ಸತ್ಯವನ್ನು ತಿಳಿ ಹೇಳಿದರು.
ಮುಖ್ಯಶಿಕ್ಷಕಿ ವಂದಿತಾ ಶುಭಹಾರೈಸಿದರು ಶಿಕ್ಷಕಿಯರಾದ ಮೀನಾ, ಲವೀನಾ, ನ್ಯಾನ್ಸಿ, ಶೋಭ, ಲತಾ ಉಪಸ್ಥಿತರಿದ್ದರು ವೈಎಸ್ಂ ಅಧ್ಯಕ್ಷೆ ಸ್ವಾತಿ ಹೆಗ್ಡೆ ಸ್ವಾಗತಿಸಿದರು. ಸಂಘದ ಸಂಯೋಜಕ ಶಿಕ್ಷಕ ಆಲ್ವಿನ್ ದಾಂತಿ ಪರಿಚಯಿಸಿದು ಕಾರ್ಯದರ್ಶಿ ನಂದನ್ ವಂದಿಸಿದರು.