ವಿಟ್ಲ: ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಗೆ ಬೆಂಕಿ; ಅಪಾರ ನಷ್ಟ
ಬಂಟ್ವಾಳ, ಫೆ.11: ದಿನಸಿ ಸಾಮಗ್ರಿ ಹಾಗೂ ಬೀಡಿ ಬ್ರೆಂಚ್ ಹೊಂದಿದ್ದ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ವೀರಕಂಭದಲ್ಲಿ ಬುಧವಾರ ರಾತ್ರಿ ನಡೆದಿದೆ.
ವೀರಕಂಭ ಗ್ರಾಮ ಪಂಚಾಯತ್ ಕಟ್ಟಡದ ಮುಂಭಾಗ ಇರುವ ಅಬ್ದುಲ್ ಹಮೀದ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದೆ. ಅಂಗಡಿ ಮನೆಗೆ ತಾಗಿಕೊಂಡೇ ಇರುವುದರಿಂದ ಮನೆಯ ಮಹಡಿಯ ಮೇಲ್ಛಾವಣಿಗೆ ಕೂಡ ಬೆಂಕಿ ತಗಲಿ ಅಪಾರ ಹಾನಿ ಉಂಟಾಗಿದೆ.
ರಾತ್ರಿ ಸುಮಾರು 9:30ರ ವೇಳೆಗೆ ಬೆಂಕಿ ತಗುಲಿದ್ದು ಅಂಗಡಿಯೊಳಗಿದ್ದ ರೆಫ್ರಿಜರೇಟರ್ ಸಹಿತ ದಿನಸಿ ಸಮಗ್ರಿ, ಬೀಡಿಗೆ ಸಂಬಂಧಿಸಿದ ವಸ್ತುಗಳೆಲ್ಲವೂ ಸುಟ್ಟು ಕರಕಲವಾಗಿವೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬಂಟ್ವಾಳ ಅಗ್ನಿಶಾಮಕ ದಳದ ಎರಡು ವಾಹನಗಳ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸುತ್ತಿದ್ದು ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ.
ವಿಟ್ಲ ಠಾಣೆ ಎಸ್ಸೈ ವಿನೋದ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.