ಮುಂಬೈ ಬಾರ್ ಮಾಲಕ ವಶಿಷ್ಟ ಕೊಲೆ ಪ್ರಕರಣ: ಸೂತ್ರಧಾರ ಸೈಫ್ ಬಂಧನ
ಉಡುಪಿ, ಫೆ.14: ಮುಂಬೈ ಮಾಯಾ ಬಾರ್ ಮಾಲಕ ವಶಿಷ್ಠ ಸತ್ಯ ನಾರಾಯಣ ಯಾದವ್(45) ಕೊಲೆ ಪ್ರಕರಣದ ಸೂತ್ರಧಾರ, ಎಕೆಎಂಎಸ್ ಬಸ್ ಮಾಲಕ ಸೈಫ್ ಆಲಿಯಾಸ್ ಸೈಫುದ್ದೀನ್ ಎಂಬಾತನನ್ನು ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದ ತಂಡ ಫೆ.13ರಂದು ಸಂಜೆ ವೇಳೆ ಬಂಧಿಸಿದೆ.
ಫೆ.11ರಂದು ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳಾದ ಸುಮಿತ್ ಮಿಶ್ರಾ, ಅಬ್ದುಲ್ ಶುಕೂರ್ ಯಾನೆ ಅದ್ದು, ಅವಿನಾಶ್ ಕರ್ಕೇರ, ಮೊಹಮ್ಮದ್ ಶರೀಫ್ ವಿಚಾರಣೆ ವೇಳೆ ನೀಡಿದ ಮಾಹಿತಿಯಂತೆ, ಪ್ರಕರಣಕ್ಕೆ ಸಂಚು ರೂಪಿಸಿದ್ದ ಸೈಫುದ್ದೀನ್ನನ್ನು ಮಲ್ಪೆಯ ಕೊಡವೂರಿನಲ್ಲಿರುವ ಆತನ ಮನೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ತಿಳಿಸಿದ್ದಾರೆ.
ಆತನನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಫೆ.27ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಶಿಷ್ಠ ಸತ್ಯನಾರಾಯಣ ಯಾದವ್ನ ಬಾರ್ನಲ್ಲಿ ಸೈಫುದ್ದೀನ್ ಮತ್ತು ಅಕ್ರಂ ಎಂಬವರು ಪಾಲುದಾರರಾಗಿದ್ದಾರೆ. ಮುಂಬೈದಿಂದ ಉಡುಪಿಗೆ ಬಂದಿದ್ದ ವಶಿಷ್ಠ ಇವರಿಬ್ಬರ ಜೊತೆ ಇದ್ದನು. ಅಲ್ಲದೆ ವಿಡಿಯೋ ಕರೆ ಮಾಡಿ ಕೂಡ ಆತ ಹೇಳಿದ್ದನು ಎಂದು ವಶಿಷ್ಟನ ಪತ್ನಿ ತನ್ನ ಹೇಳಿಕೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.
ಪಾಲುದಾರಿಕೆ ಸಂಬಂಧಿಸಿದ ಹಣಕಾಸಿನ ವಿಚಾರವೇ ಕೊಲೆಗೆ ಕಾರಣ ಎಂಬುದು ತಿಳಿದುಬಂದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ವಶಿಷ್ಠರ ಪತ್ನಿ ಆರೋಪಿಸಿದ ಅಕ್ರಂ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಫೆ.9ರಂದು ರಾತ್ರಿ ವೇಳೆ ವಶಿಷ್ಟನನ್ನು ಕೊಲೆ ಮಾಡಿ ಬೆಳ್ಳಂಪಳ್ಳಿಯಲ್ಲಿ ಎಸೆದು ಪರಾರಿಯಾಗಿದ್ದರು. ಈ ಸಂಬಂಧ ಈವರೆಗೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.