ಸಿಎಎ ಕಾಯ್ದೆ ಹಿಟ್ಲರ್ ಕಾನೂನಿನ ಕಾಪಿ ಪೇಸ್ಟ್ : ನ್ಯಾಯವಾದಿ ಬಾಲನ್
ಎನ್ಆರ್ಸಿ, ಎನ್ಪಿಆರ್ ವಿರೋಧಿಸಿ ತುಂಬೆಯಲ್ಲಿ ಪ್ರತಿಭಟನೆ
ಬಂಟ್ವಾಳ, ಫೆ.14: ಹಿಟ್ಲರ್ ಆಡಳಿತದ ಜರ್ಮನಿಯಲ್ಲಿ ಜಾರಿಯಲ್ಲಿದ್ದ ಕರಾಳ ಕಾನೂನುಗಳೆಲ್ಲವೂ ಇಂದು ದೇಶದಲ್ಲಿ ಜಾರಿಯಾಗುತ್ತಿದ್ದು ಇದರ ಹಿಂದೆ ಇಡೀ ಇಂಡಿಯಾವನ್ನು ಬ್ರಾಹ್ಮಣರ ಹಿಡಿತಕ್ಕೆ ಕೊಂಡೊಯ್ಯುವ ಕುತಂತ್ರ ಅಡಗಿದೆ. ಈ ಬಗ್ಗೆ ಈ ದೇಶದ ದಲಿತರು, ಶೂದ್ರರು, ಅಲ್ಪಸಂಖ್ಯಾತರು ಜಾಗೃತರಾಗಬೇಕು ಎಂದು ಹೈಕೋರ್ಟ್ನ ನ್ಯಾಯವಾದಿ ಬಾಲನ್ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ಎನ್ಆರ್ಸಿ, ಎನ್ಪಿಆರ್ ಪ್ರಕ್ರಿಯೆಯನ್ನು ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ತುಂಬೆ ಇದರ ವತಿಯಿಂದ ತುಂಬೆಯ ಬಿ.ಎ. ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಿಎಎ ಕಾಯ್ದೆಯ ಮೂಲ ಜರ್ಮನಿಯದ್ದಾಗಿದೆ. ಆರ್ಯರನ್ನು ಹೊರೆತು ಪಡಿಸಿ ಉಳಿದ ಸಮುದಾಯಗಳಿಗೆ ಪೌರತ್ವ, ಅಧಿಕಾರ ನೀಡುವುದನ್ನು ನಿರ್ಬಂಧಿಸಿ ಹಿಟ್ಲರ್ ಬರೆದ 25 ಅಂಶಗಳ ಕಾರ್ಯಕ್ರಮವನ್ನೇ ಆರೆಸ್ಸೆಸ್ ಸಂಸ್ಥಾಪಕ ವಿ.ಡಿ.ಸಾವರ್ಕರ್ ನಕಲು ಮಾಡಿ ಪುಸ್ತಕ ಬರೆದಿದ್ದಾರೆ. ಅದನ್ನು ಅನುಷ್ಠಾನಗೊಳಿಸುವ ಕೆಲಸ ಇಂದಿನ ಬಿಜೆಪಿ ಮಾಡುತ್ತಿದೆ ಎಂದು ಅವರು ಹೇಳಿದರು.
ಸಿಎಎ ಕೇವಲ ಮುಸ್ಲಿಮರ ವಿರೋಧಿ ಕಾನೂನಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಹಿಂದೂಗಳಿಗೆ ಮಾತ್ರ ಪೌರತ್ವ ನೀಡುವುದರ ಹಿಂದೆಯೂ ಕುತಂತ್ರ ಅಡಗಿದೆ. ಈ ಮೂರು ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣರು ಮತ್ತು ಬನಿಯಾಗಳು ಇದ್ದಾರೆ. ಹಾಗಾಗಿ ಈ ದೇಶಗಳ ಹಿಂದೂಗಳಿಗೆ ಮಾತ್ರ ಪೌರತ್ವ ನೀಡಲಾಗುತ್ತಿದೆ. ಅದೇ ರೀತಿ ಶ್ರೀಲಂಕಾ, ಭೂತಾನ್, ಬರ್ಮಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ, ಶೂದ್ರರಾದ ಕೆಳ ಜಾತಿಗೆ ಸೇರಿದ ಹಿಂದೂಗಳಿರುವ ಕಾರಣ ಆ ದೇಶಗಳ ಹಿಂದೂಗಳಿಗೆ ಪೌರತ್ವ ನೀಡಲಾಗುತ್ತಿಲ್ಲ. ಹಾಗಾಗಿ ಸಿಎಎ ಕಾನೂನು ಮುಸ್ಲಿಮರಿಗೆ ಮಾತ್ರವಲ್ಲ ದಲಿತ, ಶೂದ್ರ, ಆದಿವಾಸಿಗಳ ವಿರೋಧಿ ಕಾನೂನಾಗಿದೆ. ಇದು ಬ್ರಾಹ್ಮಣ, ಬನಿಯಾಗಳ ಪರ ಇರುವ ಕಾನೂನಾಗಿದೆ. ಹಾಗಾಗಿ ನಾವು ವಿರೋಧ ಮಾಡುತ್ತೇವೆ ಎಂದು ಅವರು ಹೇಳಿದರು.
ಪ್ರತಿಭಟನಾ ಸಮಾವೇಶವನ್ನು ತುಂಬೆ ಜುಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ ದುಅ ಮೂಲಕ ಉದ್ಘಾಟಿಸಿದರು. ಸಮಸ್ತ ಮುಶಾವರದ ಸದಸ್ಯ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟನಾ ಭಾಷಣ ಮಾಡಿದರು. ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಸಅದಿ, ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಮಾಜಿ ಸಚಿವೆ ಬಿ.ಟಿ.ಲಲಿತ್ ನಾಯ್ಕ್, ಪಿಎಫ್ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಪತ್ರಕರ್ತ ರಾ ಚಿಂತನ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂವಿಧಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಟಿ.ಕೆ.ಮುಹಮ್ಮದ್ ಶರೀಫ್ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಮೇಯರ್ ಕೆ.ಅಶ್ರಫ್, ಮಿತ್ತಬೈಲ್ ಖತೀಬ್ ಅಶ್ರಫ್ ಫೈಝಿ, ತುಂಬೆ ಮಸೀದಿ ಅಧ್ಯಕ್ಷ ಇಮ್ತಿಯಾಝ್ ಆಲ್ಫ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಸ್.ಅಮೀರ್ ತುಂಬೆ ಸ್ವಾಗತಿಸಿದರು. ಕಮಲ್ ವಳವೂರು ಧನ್ಯವಾದಗೈದರು. ಗೀಲಾನಿ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.
'ಪೌರತ್ವವೂ ಬ್ರಾಹ್ಮಣರಿಗೆ ಸೀಮಿತಗೊಳಿಸುವ ಕುತಂತ್ರ'
140 ವಿದೇಶಿ ರಾಯಭಾರಿಗಳಲ್ಲಿ 140 ಮಂದಿಯೂ ಬ್ರಾಹ್ಮಣರಾಗಿದ್ದಾರೆ. ರಾಷ್ಟ್ರಪತಿಯ 49 ಕಾರ್ಯದರ್ಶಿಗಳಲ್ಲಿ 39 ಬ್ರಾಹ್ಮಣರು. ಉಪ ರಾಷ್ಟ್ರಪತಿಯ 7 ಕಾರ್ಯದರ್ಶಿಗಳಲ್ಲಿ 7 ಮಂದಿಯೂ ಬ್ರಾಹ್ಮಣರು. ಪ್ರಧಾನ ಮಂತ್ರಿಯ 34 ಮಂದಿ ಕಾರ್ಯದರ್ಶಿಗಳಲ್ಲಿ 31 ಮಂದಿ ಬ್ರಾಹ್ಮಣರು ಉಳಿದ 3 ಮಂದಿ ಸಂಘಿಗಳು. ಸುಪ್ರೀಂ ಕೋರ್ಟ್ನ 26 ನ್ಯಾಯಮೂರ್ತಿಗಳಲ್ಲಿ 23 ಮಂದಿ ಬ್ರಾಹ್ಮಣರು. ಹೈಕೋರ್ಟ್ 330 ನ್ಯಾಯಮೂರ್ತಿಗಳಲ್ಲಿ 306 ಮಂದಿ ಬ್ರಾಹ್ಮಣರು. 3,600 ಐಎಎಸ್ ಅಧಿಕಾರಿಗಳಲ್ಲಿ 2,750 ಮಂದಿ ಬ್ರಾಹ್ಮಣರು. ಇಷ್ಟೇ ಅಲ್ಲದೆ ಗುಪ್ತಚರ ಇಲಾಖೆಯಾದ ರಾ, ಐಬಿ, ಉನ್ನತ ತನಿಖಾ ಸಂಸ್ಥೆಯಾದ ಸಿಬಿಐ, ಎನ್ಐಎ, ಐಟಿ ಹಾಗೂ ಸೈನ್ಯ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಪೂರ್ತಿ ಬ್ರಾಹ್ಮಣರ ಕೈಯಲ್ಲಿ ಇದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ದೇಶದ 300 ಲಕ್ಷ ಕೋಟಿ ರೂ. ಸಂಪತ್ತನ್ನು ಬನಿಯಾಗಳಿಗೆ ಮಾರಾಟ ಮಾಡಲಾಗಿದೆ. 2014ರಲ್ಲಿ 22 ಬಿಲಿಯನ್ ಡಾಲರ್ ಇದ್ದ ಅಂಬಾನಿಯ ಆಸ್ತಿ 2018ರಲ್ಲಿ 55 ಬಿಲಿಯನ್ ಡಾಲರ್ ಆಗಿದೆ. ಇಡೀ ದೇಶದ ಆಸ್ತಿಯಲ್ಲಿ ಶೇ.6ರಷ್ಟು ಆಸ್ತಿ ಬ್ರಾಹ್ಮಣರು ಮತ್ತು ಬನಿಯಾಗಳ ಕೈಯಲ್ಲಿ ಇದೆ. ಇನ್ನು ದೇಶದ ಪೌರತ್ವ ಅವರಿಗೆ ಮಾತ್ರ ಸೀಮಿತವಾಗಬೇಕೆಂದ ಕುತಂತ್ರ ನಡೆಯುತ್ತಿದೆ. ಇದು ಫಾಶಿಸಂ ಆಗಿದೆ. ಇದರ ವಿರುದ್ಧ ಮೂಲ ನಿವಾಸಿಗಳಾದ ನಾವು ಎಚ್ಚೆತ್ತುಕೊಳ್ಳಬೇಕು ಎಂದು ನ್ಯಾಯವಾದಿ ಬಾಲನ್ ಹೇಳಿದರು.