ಹಿರಿಯಡ್ಕ: ವಚನಸಾರ ಪ್ರಸರಣೋಪನ್ಯಾಸ ಮಾಲಿಕೆ
ಉಡುಪಿ, ಫೆ.15:ಮಂಗಳೂರು ವಿಶ್ವವಿದ್ಯಾನಿಲಯದ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಹಯೋಗದಲ್ಲಿ ವಚನ ಸಾಹಿತ್ಯ ಪರಂಪರೆ ಸಮಾಜ ಎಂಬ ಶಿರೋನಾಮೆಯಡಿಯಲ್ಲಿ ವಚನಸಾರ ಪ್ರಸರಣೋಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಬಾರಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ನೇಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಆಚಾರ್, ಅಂಬಿಗರ ಚೌಡಯ್ಯ ಅವರ ವಚನಗಳಲ್ಲಿ ಗುರುತತ್ತ್ವದ ನೆಲೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಭಕ್ತಿಗೆ ಭಾವವೇ ಮುಖ್ಯ, ಅಂತರಂಗದ ಒಳಗಣ್ಣು ತೆರೆದಾಗ ಬದುಕು ಸಾರ್ಥಕವಾಗುತ್ತದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಡಾ.ನಾಗಪ್ಪ ಗೌಡ ಆರ್. ಕಾರ್ಯಕ್ರಮದ ಪ್ರಸ್ತುತತೆ, ಔಚಿತ್ಯದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿವಶರಣರು ಬದುಕಿದ ಜೀವನ ಕ್ರಮ, ಅವರು ಹಾಕಿಕೊಟ್ಟ ನೈತಿಕ ಮಾರ್ಗ ಇಂದಿನ ಯುವಜನತೆ ಅನುಸರಿಸಿ ನಡೆಯಬೇಕಿದೆ ಎಂದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸುಜಯಾ ಕೆ.ಎಸ್. ಸ್ವಾಗತಿಸಿ, ಕನ್ನಡ ಉಪನ್ಯಾಸಕ ರವಿಚಂದ್ರ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಆನಂದ ಎಂ.ಬಿ. ವಂದಿಸಿದರು.