ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಕಂಬಳದ ಉದ್ಘಾಟನೆ
ಕಂಬಳವು ನಿರರ್ಗಳವಾಗಿ ನಡೆಯುವಂತಾಗಲಿ: ಡಾ.ಪದ್ಮಪ್ರಸಾದ ಅಜಿಲ
ಬೆಳ್ತಂಗಡಿ: ಕಂಬಳವು ಇತಿಹಾಸವುಳ್ಳ ಪುರಾತನದಿಂದ ಬಂದ ಗ್ರಾಮೀಣ ಕ್ರೀಡೆ. ಅಡ್ಡಿ, ಆತಂಕ ಇಲ್ಲದ ಕಂಬಳವು ನಿರರ್ಗಳವಾಗಿ ನಡೆಯುವಂತಾಗಲಿ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಹೇಳಿದರು.
ವೇಣೂರು ಪೆರ್ಮುಡದಲ್ಲಿ ಶನಿವಾರ ಜರಗಿದ ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ 27ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂಡದಬೆಟ್ಟು ಜುಮ್ಮಾ ಮಸೀದಿಯ ಧರ್ಮಗುರು ಕೆ.ಎಂ. ಹನೀಫ್ ಸಖಾಫಿ ಬಂಗೇರ್ಕಟ್ಟೆ ಅವರು ಸಂದೇಶ ನೀಡಿ, ಕೋಣಗಳು ಪ್ರತಿಭೆಯ ಸ್ವರೂಪಗಳು. ಕಂಬಳದಲ್ಲಿ ಕೋಣಗಳಿಗೆ ನೀಡುವ ಸಣ್ಣಪುಟ್ಟ ಏಟುಗಳು ಹಿಂಸೆಯ ಸ್ವರೂಪ ಅಲ್ಲ. ಅದು ಕೋಣಗಳಲ್ಲಿರುವ ಪ್ರತಿಭೆಯನ್ನು ಚುರುಕುಗೊಳಿಸುವಂತೆ ಮಾಡುವ ವಿಧಾನವಾಗಿದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ವ್ಯಕ್ತಿಗತವಾಗಿ ಆತ್ಮವಿಶ್ವಾಸ ವೃದ್ಧಿಸಿಕೊಳ್ಳೋಣ ಎಂದರು.
ಕಂಬಳ ಸಮಿತಿ ಗೌರವ ಸಲಹೆಗಾರರು ಜಿ.ಪಂ. ಸದಸ್ಯರಾದ ಶೇಖರ ಕುಕ್ಕೇಡಿ, ಪಿ. ಧರಣೇಂದ್ರ ಕುಮಾರ್, ದ.ಕ.-ಉಡುಪಿ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು, ವೇಣೂರು ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ವೇಣೂರು ಪದ್ಮಾಂಬ ಸಮೂಹ ಸಂಸ್ಥೆಯ ವ್ಯವಸ್ಥಾಪಕ ಜಿನರಾಜ ಜೈನ್, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ, ವೇಣೂರು ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಸುಧೀರ್ ಭಂಡಾರಿ, ವೇಣೂರಿನ ಉದ್ಯಮಿ ಕೆ. ಭಾಸ್ಕರ ಪೈ, ಕುಕ್ಕೇಡಿ-ನಿಟ್ಟಡೆ ಬಿಲ್ಲವ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ, ವೇಣೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಮಲ ಚಂದ್ರ ಕೋಟ್ಯಾನ್, ಭಾಸ್ಕರ ಬಲ್ಯಾಯ, ಪಡಂಗಡಿ ತಾ.ಪಂ. ಸದಸ್ಯೆ ಸುಶೀಲ, ಅಳದಂಗಡಿ ತಾ.ಪಂ. ಸದಸ್ಯೆ ವಿನುಷಾ ಪ್ರಕಾಶ್, ಕುಕ್ಕೇಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಧರ್ಣಪ್ಪ ಪೂಜಾರಿ, ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಲೋಲಾಕ್ಷ ಕೆ., ಬೆಳ್ತಂಗಡಿಯ ವಕೀಲ ಸತೀಶ್ ಪಿ.ಎನ್. ಹಾಗೂ ಇತರರು ಇದ್ದರು. ವೇಣೂರು ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಪ್ರಾಸ್ತಾವಿಸಿ, ಸ್ವಾಗತಿಸಿದರು. ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರ್ವಹಿಸಿ, ಅನೂಪ್ ಜೆ. ಪಾಯಸ್ ವಂದಿಸಿದರು.