ಬೆಂಜನಪದವು: ಬಸ್ಸುಗಳ ನಡುವೆ ಢಿಕ್ಕಿ; 20ಕ್ಕೂ ಅಧಿಕ ಮಂದಿಗೆ ಗಾಯ
ಮಂಗಳೂರು: ಎರಡು ಬಸ್ಸುಗಳ ಮಧ್ಯೆ ಢಿಕ್ಕಿಯಾದ ಪರಿಣಾಮ ಇಪ್ಪತ್ತಕ್ಕೂ ಅಧಿಕ ಮಂದಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಬೆಂಜನಪದವು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿರುವುದಾಗಿ ವರದಿಯಾಗಿದೆ.
ಬೆಂಜನಪದವು ಸಮೀಪದ ಕಲ್ಪನೆ ತಿರುವಿನಲ್ಲಿ ಎರಡು ಬಸ್ಸುಗಳ ಮಧ್ಯೆ ಢಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಇಪ್ಪತ್ತಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಸಿರೋಡಿನಿಂದ ಪೊಳಲಿ ಕಡೆಗೆ ಹೋಗುವ ಸರ್ವೀಸ್ ಬಸ್ ಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿ ವಾಪಸು ಹೋಗುತ್ತಿದ್ದ ಬಸ್ ಹಿಂಬದಿಯಿಂದ ಢಿಕ್ಕಿ ಹೊಡೆದ ಕಾರಣ ಎದುರಿನ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವಾಪಸು ನೇರವಾಗಿ ನಿಂತಿದೆ.
ಹಿಂಬದಿಯಿಂದ ಢಿಕ್ಕಿ ಹೊಡೆದ ಬಸ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ರಸ್ತೆ ಬದಿ ಕಂದಕಕ್ಕೆ ಉರುಳಿದೆ.
ಬಿಸಿರೋಡಿನ ಸ್ಪರ್ಶ ಕಲಾ ಮಂದಿರಕ್ಕೆ ಬಜಪೆಯಿಂದ ಮದುಮಗಳ ದಿಬ್ಬಣವನ್ನು ಕರೆದುಕೊಂಡ ಬಂದ ಬಸ್ ಮದುವೆ ಮುಗಿಸಿ ವಾಪಾಸು ಹೋಗುವ ವೇಳೆ ಈ ಘಟನೆ ನಡೆದಿದೆ.
ಸ್ಥಳದಲ್ಲಿ ಗಾಯಗೊಂಡ ಎಲ್ಲರನ್ನೂ ತುಂಬೆ ಆಸ್ಪತ್ರೆಗೆ ದಾಖಲಿಸಿ ಸೂಕ್ತವಾದ ಚಿಕಿತ್ಸೆ ನೀಡಲು ಹಾಗೂ ಅಗತ್ಯವಿದ್ದಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡುವಂತೆ ತಹಶೀಲ್ದಾರ್ ರಶ್ಮಿ ಎಸ್. ಆರ್.ಹಾಗೂ ಪೋಲೀಸರಿಗೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.