ಪ್ರಶಸ್ತಿಗಾಗಿ ಕೆಲಸ ಮಾಡಿದರೆ ಸಂತೋಷ ಇರಲ್ಲ: ಸೋದೆ ಸ್ವಾಮೀಜಿ
ಉಡುಪಿ, ಫೆ.16: ಪ್ರಶಸ್ತಿಗಾಗಿಯೇ ಕೆಲಸ ಮಾಡಿದರೆ, ಮಾಡುವ ಕೆಲಸದಲ್ಲಿ ಸಂತೋಷ ಇರುವುದಿಲ್ಲ. ಸಮಾಜಕ್ಕೆ ಸಮರ್ಪಣಾ ಭಾವದಿಂದ ಕಾರ್ಯವೆಸಗಿದರೆ ಸಂತೋಷ, ಕೀರ್ತಿ ಎರಡೂ ಸಿಗುತ್ತದೆ. ಅಂತವರಿಗೆ ಪ್ರಶಸ್ತಿ ದೊರೆ ತರೆ ಅದಕ್ಕೆ ಮೌಲ್ಯ ಇರುತ್ತದೆ ಎಂದು ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಯಕ್ಷಗಾನ ಕಲಾರಂಗದ ವತಿಯಿಂದ ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ಫೆ.15ರಂದು ಸಂಸ್ಥೆಯ ಸಕ್ರಿಯ ಕಾರ್ಯಕರ್ತ ಯು. ಅನಂತ ರಾಜ ಉಪಾಧ್ಯ ಅವರಿಗೆ ಸೇವಾಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.
ಪ್ರಶಸ್ತಿ ಸ್ವೀಕರಿಸಿದ ಯು. ಅನಂತರಾಜ ಉಪಾಧ್ಯ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ.ಭಟ್ ಅಭಿನಂದನಾ ಭಾಷಣ ಮಾಡಿದರು. ಡಾ.ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಎಚ್.ಎನ್.ಶೃಂಗೇಶ್ವರ ವಂದಿಸಿದರು.