ಉಡುಪಿ: ವಿಕಾಸ ಯುವ ಪ್ರೇರಣಾ ಕಾರ್ಯಗಾರ
ಉಡುಪಿ, ಫೆ.16: ಯುವಕರು ವಿದ್ಯಾಭ್ಯಾಸ ಮುಗಿಸಿಕೊಂಡು ಸರಕಾರಿ ಉದ್ಯೋಗವನ್ನು ನಿರೀಕ್ಷಿಸದೆ ಸ್ವಂತ ಉದ್ಯೋಗ ಪ್ರಾರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು. ಆ ಮೂಲಕ ಇತರರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಿರಬೇಕು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಂಗಳೂರು ಪ್ರಾದೇಶಿಕ ವ್ಯವಸ್ಥಾಪಕ ರಮೇಶ್ ತುಂಗಾ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವತಿಯಿಂದ ಉಡುಪಿಯ ಸೇಂಟ್ ಮೇರಿಸ್ ಐಟಿಐ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ವಿಕಾಸ ಯುವ ಪ್ರೇರಣಾ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆರ್ಟಿಸಿಯ ಮಂಜುನಾಥ ಹಾಗೂ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತೆಯ ಆರ್ಥಿಕ ಸಲಹೆಗಾರ ಸಂತೋಷ್ ಕುಮಾರ್ ಮುದ್ರಾ ಯೋಜನೆ ಬಗ್ಗೆ ವಿವರ ನೀಡಿ, ದೇಶದ ಆರ್ಥಿಕ ಪ್ರಗತಿಗೆ ಎಂಎಸ್ಎಂಇ ಕೊಡುಗೆ ಅಪಾರವಾದುದು ಎಂದರು.
ಕಾಲೇಜಿನ ಪ್ರಾಂಶುಪಾಲ ಗಿಲ್ಬರ್ಟ್ ಬ್ರಗಾಂಜ ಮಾತನಾಡಿದರು. ಕೆವಿಜಿ ಬ್ಯಾಂಕಿನ ಉಡುಪಿ ಶಾಖೆಯ ವ್ಯವಸ್ಥಾಪಕ ಆರ್.ಎನ್.ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇಂದ್ರಾಣಿ ಶಾಖೆಯ ಶಾಖಾಧಿಕಾರಿ ರವೀಂದ್ರ ವಂದಿಸಿದರು.