ಶಿರಾಡಿ: ಮಗುಚಿ ಬಿದ್ದ ಮಿನಿ ಬಸ್; 12 ಮಂದಿಗೆ ಗಾಯ
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಮಿನಿ ಬಸ್ಸೊಂದು ಹೆದ್ದಾರಿ ಬದಿಗೆ ಮಗುಚಿ ಬಿದ್ದು, ಬಸ್ಸಿನಲ್ಲಿದ್ದ 12 ಮಂದಿ ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ.
ಸಕಲೇಶ್ಪುರದ ಬಾಗೇ ಎಂಬಲ್ಲಿಂದ ದ.ಕ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಕುಟುಂಬ ಸದಸ್ಯರನ್ನು ಸಾಗಿಸುತ್ತಿದ್ದ ಮಿನಿ ಬಸ್ಸಿನ ಸ್ಟೇರಿಂಗ್ ತುಂಡರಿಸಲ್ಪಟ್ಟು ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸು ಹೆದ್ದಾರಿಯ ಬದಿಗೆ ಮಗುಚಿ ಬಿದ್ದಿತ್ತು. ಈ ಪರಿಣಾಮ ಬಸ್ಸಿನಲ್ಲಿದ್ದ ವಿನೋದಾ ರೈ, ಶ್ರೀಧರ್ ಶೆಟ್ಟಿ, ಜಗನ್ನಾಥ್ ಶೆಟ್ಟಿ, ಪ್ರೇಮಲತಾ, ಡೀಲಾಕ್ಷ, ಚಾಲಕ ಮಹೇಶ್ ಗಂಭೀರ ಗಾಯಗೊಂಡು ಮಂಗಳೂರು ಹಾಗೂ ಪುತ್ತೂರಿನ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಆರು ಮಂದಿಗೆ ಗಂಭೀರ ಸ್ವರೂಪವಲ್ಲದ ಗಾಯವಾಗಿದ್ದು, ಅವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿರ್ಗಮಿಸಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಬಸ್ಸಿನಲ್ಲಿದ್ದ ಜಯಣ್ಣ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.