ಉಪ್ಪಿನಂಗಡಿ ದೇವಳಕ್ಕೆ ಪುತ್ತೂರು ಉಪ ವಿಭಾಗಾಧಿಕಾರಿ ಭೇಟಿ
ಉಪ್ಪಿನಂಗಡಿ, ಫೆ.17: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಹಾಗೂ ಉತ್ಸವಾದಿಗಳ ಹಿನ್ನೆಲೆಯಲ್ಲಿ ಪುತ್ತೂರು ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಸೋಮವಾರ ದೇವಸ್ಥಾನಕ್ಕೆ ಭೇಟಿ ನೀಡಿ ಉತ್ಸವಕ್ಕೆ ಕೈಗೊಂಡಿರುವ ವ್ಯವಸ್ಥೆ, ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ನದಿಯಲ್ಲಿ ಇರುವ ಉದ್ಧವ ಲಿಂಗದ ಪರಿಸರದ ಪರಿಶೀಲನೆ ನಡೆಸಿದರು. ನದಿಯಲ್ಲಿ ಹಾಕಲಾಗಿರುವ ಸಂತೆ ವ್ಯಾಪಾರಸ್ಥರು ಅಲ್ಲಲ್ಲಿ ಹರಡಿ ಬಿಟ್ಟು ಹೋಗಿರುವ ಕಸ, ಕುಡಿದು ಎಸೆದಿರುವ ಎಳೆ ನೀರಿನ ಸಿಪ್ಪೆಇತ್ಯಾದಿಗಳನ್ನು ಗಮನಿಸಿ ಪರಿಸರದಲ್ಲಿ ಶುಚಿತ್ವ ಕಾಪಾಡುವಂತೆ ದೇವಸ್ಥಾನದ ಅಧಿಕಾರಿಗಳಿಗೆ ಸೂಚಿಸಿದರು.
ಪೂಜೆ, ಪುರಸ್ಕಾರ: ಉಪ ವಿಭಾಗಾಧಿಕಾರಿಯವರು ಶ್ರೀ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಸ್ಥಾನದ ವತಿಯಿಂದ ಅವರನ್ನು ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಲಾಯಿತು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಯಾದ ಪದ್ಮನಾಭ, ಕೃಷ್ಣಪ್ರಸಾದ್ ಬಡಿಲ, ದಿವಾಕರ ಎ.ಸಿ.ಯನ್ನು ಬರಮಾಡಿಕೊಂಡು ಸ್ವಾಗತಿಸಿದರು. ಉಪ ವಿಭಾಗಾಧಿಕಾರಿಯೊಂದಿಗೆ ಕಂದಾಯ ನಿರೀಕ್ಷಕ ಜಯವಿಕ್ರಮ, ಗ್ರಾಮಕರಣಿಕ ಸುನೀಲ್ ಕುಮಾರ್ ಉಪಸ್ಥಿತರಿದ್ದರು.